ದಿ.ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು – 12
ಧರ್ಮಸೂಕ್ಷ್ಮ – ಶ್ರೀ ಲಂಕಾಕೃಷ್ಣಮೂರ್ತಿಯವರು ಹೇಳಿದ ಕಥೆ
– ಆರೂಢಿ ಸುಮಂತ್
(ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ದಿ ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ)
ಅಣ್ಣ ತಮ್ಮಂದಿರ ನಡುವೆ ಆಸ್ತಿ ವಿವಾದ, ಮೋಸ ಅಥವಾ ತಾರತಮ್ಯ ಸಾಮಾನ್ಯ ಸನ್ನಿವೇಶ. ಯುಗ ಯುಗದಿಂದಲೂ ಈ ಅಪರಾಧ ನಡೆಯಯುತ್ತಲೇ ಇದೆ. ಇದಕ್ಕೆ ಯಾವ ಮನೆಯು ಹೊರತಲ್ಲ. ಈ ಬಗ್ಗೆ ಒಂದು ಕಥೆ ಇದೆ.
ಹಿಂದೆ ಶಂಖಡು ಹಾಗೂ ಲಿಖಿತಡು ಎಂಬ ಸೋದರರು ಇದ್ದರು. ಇವರು ಉತ್ತಮಕುಲದಲ್ಲಿ ಹುಟ್ಟಿ ಧರ್ಮದ ಬಗ್ಗೆ ತಿಳಿದುಕೊಂಡರು. ಇವರಿಗೆ ಪಿತ್ರಾರ್ಜಿತವಾದ ಆಸ್ತಿಯಾಗಿ ಒಂದು ಹಣ್ಣಿನ ಮರ ಇತ್ತು. ಈ ಮರದಲ್ಲಿ ಬಿಡುವ ಹಣ್ಣಿನಿಂದಲೇ ಇವರು ಹೊಟ್ಟೆ ಹೊರೆಯುತ್ತಿದ್ದರು.ಸಮಾನ ಹಕ್ಕುದಾರರಾದ ಇಬ್ಬರಿಗೂ ತಲಾ ಅರ್ಧದಂತೆ ಹಣ್ಣುಗಳು ಹಂಚಿಕೆಯಾಗುತ್ತಿದ್ದವು. ಆದರೆ ಒಬ್ಬ ಸಹೋದರ, ಮತ್ತೊಬ್ಬನ ಭಾಗದ ಹಣ್ಣನ್ನೂ ಸಹ ಅನುಭವಿಸತೊಡಗಿದನು. ಇದರಿಂದ ಒಬ್ಬನು ತನ್ನ ಭಾಗದ ಫಲದಿಂದ ವಂಚಿತನಾದನು. ವಿಷಯ ನ್ಯಾಯಕ್ಕೆ ಮೊರೆಯಿಡಲಾಯಿತು. ರಾಜನು ಧರ್ಮವನ್ನರಿತ ಸೋದರರ ಒತ್ತಾಸೆಯ ಮೇರೆಗೆ ವಿವಾದ ಕೇಳಿ, ಬೇರೆಯವನ ಭಾಗವನ್ನು ಅನುಭವಿಸಿದ ಸಹೋದರನಿಗೆ ಎರಡು ಕೈಗಳನ್ನು ಕತ್ತರಿಸಬೇಕೆಂದು ತೀರ್ಮಾನ ನೀಡಿ, ಕೈಗಳನ್ನು ಕತ್ತರಿಸಲಾಯಿತು. ಅನಂತರ ತಪ್ಪಿಗೆ ಶಿಕ್ಷೆ ಪಡೆದ ಸಹೋದರ ತಾನು ಪಾಪದಿಂದ ವಿಮುಕ್ತಿ ಹೊಂದಿದೆನೆಂದು ತಕ್ಕ ಶಿಕ್ಷೆ ಧರ್ಮದಂತೆ ತನಗೆ ಲಭಿಸಿತೆಂದೂ, ತನ್ನ ಅಧರ್ಮ ಮುಂದಿನ ಪೀಳಿಗೆಗೆ ಶಾಪವಾಗಿಲ್ಲವೆಂದೂ ಸಂತೋಷದಿಂದ ಪ್ರಾಯಶ್ಚಿತ್ತಕ್ಕಾಗಿ ನದಿಯಲ್ಲಿ ಸ್ನಾನ ಮಾಡಿದನು. ತಪ್ಪನ್ನು ಅರಿತು, ಧರ್ಮದಂತೆ ಶಿಕ್ಷೆ ಅನುಭವಿಸಿ ಪ್ರಾಯಶ್ಚಿತ್ತ ಹೊಂದಿದ ಕಾರಣ, ಕಳೆದುಕೊಂಡ ಕೈಗಳನ್ನು ಮತ್ತೆ ಪಡೆದು ಧರ್ಮದಿ ಬಾಳಿದನು. ಈ ನದಿ ಇಂದಿಗೂ “ಬಾಹುದ” ನದಿಯಿಂದು ಆಂಧ್ರದಲ್ಲಿ ಇದೆ. ಆದ್ದರಿಂದ ಧರ್ಮಾಚರಣೆಯಲ್ಲಿ ಏನು ಕಳೆದುಕೊಂಡವೆಂಬುದು ಮುಖ್ಯವಲ್ಲ. ಧರ್ಮಾಚರಣೆ ಮುಖ್ಯ.