ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
(ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ
ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ)
ಶಾಂತಿ ಪುರುಷ:ದಿII ಲಂಕಾ ಕೃಷ್ಣಮೂರ್ತಿ
-ಅಬ್ಬಯ್ಯ
ಇವರು ಶ್ರೀರಾಮ, ಬುದ್ಧ, ಯೇಸು, ಅಕ್ಬರ್, ಮಹಾತ್ಮಾಗಾಂಧಿ ಇವುರಗಳಿಗೆ ಸರಿಸಮಾನರೆಂದರೆ ತಪ್ಪಾಗಲಾರದು. ಇವರು ದೈವಸಂಭೂತರೂ ಹೌದು. ಇವರ ಸದ್ಗುಣಗಳನ್ನು ವರ್ಣಿಸಲು ನನ್ನಿಂದ ಅಸಾಧ್ಯವಾದರೂ ಅಲ್ಪನಾದ ನಾನು ಅವರ ಬಗ್ಗೆ ಬರೆಯಲು ಇಚ್ಛಿಸುತ್ತೇನೆ.
ಇವರು ಉನ್ನತ ಉದ್ಯೋಗದಲ್ಲಿದ್ದರೂ ಸಾಮಾನ್ಯ ವ್ಯಕ್ತಿಯಂತೆ ವರ್ತಿಸುತ್ತಿದ್ದರು. ಅಲ್ಲದೆ ದೈವಭಕ್ತರು. ದೈವಸೇವೆಗಿಂತ ಜನಸೇವೆಯಲ್ಲಿ ಹಗಲಿರುಳೆನ್ನದೆ ದುಡಿಯುತ್ತಿದ್ದರು. ಬಡಮಕ್ಕಳಲ್ಲಿ, ವೃದ್ಧರಲ್ಲಿ ಬಹಳ ಗೌರವ ಪ್ರೀತಿ. ಇವ ಬಡವ, ಇವ ಬಲ್ಲಿದನೆಂಬ ಭೇದ ಭಾವನೆ ಇರಲಿಲ್ಲ. ಎಲ್ಲರು ಸರಿಸಮನರೆ, ದೈವದೃಷ್ಟಿಯಲ್ಲಿ ಎಲ್ಲರೂ ಒಂದೇ. ಸರ್ವ ಧರ್ಮಗಳೂ ಒಂದೇ. ಸರ್ವರಲ್ಲಿಯೂ ಪರಮಾತ್ಮನು ದಿವ್ಯಚೇತನವಾಗಿ ಬೆಳಗುತ್ತಾನೆ. ಇವನು ಮೇಲು ಇವನು ಕೀಳು ಎಂದು ವರ್ತಿಸಿದವರಲ್ಲ. ಇವರು ಕುಟುಂಬಸ್ಥರಾದರು ಸಂಬಂಧಿಗಳಿಗೆ ನಂಬಿದವರಿಗೆ ಅನ್ಯಾಯ, ಅಧರ್ಮ, ಮೋಸ, ವಂಚನೆಗಳನ್ನು ಮಾಡಲಿಲ್ಲ. ಯಾವ ವಿಧದಲ್ಲಿ ಆಗಲಿ ಅವರುಗಳ ಸುಖಕ್ಕಾಗಿ ಆಸ್ತಿಪಾಸ್ತಿಗಳನ್ನ ಸಂಪಾದಿಸಲಿಲ್ಲ. ಪುರಂದರದಾಸರಂತೆ “ದಾಸರಿಗೆ ದಾಸನಾಗಿ ಜನಸೇವೆಯೇ ಜನಾರ್ಧನನ ಸೇವೆಯೆಂದು” ಬಾಳಿದವರು. “ಧರ್ಮಪ್ರಭ” ಸಂಸ್ಥಾಪಕರಾಗಿ ಇಡೀ ಜೀವನವನ್ನೇ ಅದಕ್ಕಾಗಿ ಮುಡುಪಾಗಿಟ್ಟರು.
ಇವರಿಗೆ ಜನಸೇವೆ, ಪ್ರಕೃತಿಸೇವೆಯಲ್ಲಿ ಬಹಳ ಆಸಕ್ತಿ. ಯಾವ ಸಂಘ ಸಂಸ್ಥೆಗಳೇ ಆಗಲಿ ಆಹ್ವಾನಕೊಟ್ಟರೆ ಸಂಕೋಚವಿಲ್ಲದೆ ಭಾಗವಹಿಸಿ ಅಲ್ಲಿನ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಟ್ಟು ಅವುಗಳಲ್ಲಿ ಏನಾದರೂ ತಪ್ಪುಗಳಿದ್ದರೆ ಅವುಗಳನ್ನು ತಿದ್ದಿ ಜ್ಞಾನಾರ್ಜನೆಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವುದು, ಅವರಲ್ಲಿನ ಅಜ್ಞಾನವನ್ನು ಹೋಗಲಾಡಿಸುವು ಇವರ ಧ್ಯೇಯವಾಗಿತ್ತು.
ಅವರ ಹಿತವಚನ, ಕಾವ್ಯ, ಹಿತವಚನ. ಹಿತೋಪದೇಶವನ್ನು ನಮ್ಮ ಧರ್ಮಪ್ರಭದ ಸದಸ್ಯರ್ಯಾರೂ ಜೀವನಪರ್ಯಂತ ಮರೆಯುವಂತಿಲ್ಲ. ಅವರಿಲ್ಲದ ಕಾರಣ ನಮ್ಮ ಸಂಸ್ಥೆಗೆ ಬಹಳ ನಷ್ಟವಾಗಿದೆ. ಲಂಕಾಕೃಷ್ಣಮೂರ್ತಿ ಅವರಂತಹ ಮಹಾವ್ಯಕ್ತಿಯ ಆದರ್ಶಗುಣಗಳು ನಮಗೆ ಮಾರ್ಗದರ್ಶಕವಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ : ಓಂ ಶಾಂತಿಃ : ಓಂ ಶಾಂತಿಃ