ಶ್ರೀಮದ್ಭಾಗವತ ಮಹಾತ್ಮ್ಯ
ಲೇಟ್ ಶ್ರೀ ಲಂಕಾ ಕೃಷ್ಣಮೂರ್ತಿ
ಐದನೇ ಅಧ್ಯಾಯ
ತಂದೆ ಸಂಸಾರ ಬಿಟ್ಟ ಮೇಲೆ ಧುಂಧುಕಾರಿ ತಾಯಿಯನ್ನು ಚೆನ್ನಾಗಿ ಹೊಡೆದು “ದುಡ್ಡೆಲ್ಲಿದೆ ಹೇಳು. ಇಲ್ಲದಿದ್ದರೆ ದೊಣ್ಣೆಯಿಂದ ಸಾಯಿಸುತ್ತೇನೆ” ಎಂದು ಹೆದರಿಸಿದನು. ಆಕೆಯು ಅವನ ಮಾತಿಗೆ ಹೆದರಿ ಇಂತಹ ಪುತ್ರನಾದನಲ್ಲಾ ಎಂದು ದುಃಖಿಸುತ್ತ ರಾತ್ರಿ ಭಾವಿಯಲ್ಲಿ ಬಿದ್ದು ಪ್ರಾಣಬಿಟ್ಟಳು. ಗೋಕರ್ಣನು ಯೋಗದಲ್ಲಿದ್ದು ತೀರ್ಥಯಾತ್ರೆಗೆ ಹೊರಟನು. ಆತನಿಗೆ ಸುಖವೂ ಇಲ್ಲ, ದುಃಖವೂ ಇಲ್ಲ. ವೈರಿಯೂ ಇಲ್ಲ. ಬಂಧುವೂ ಇಲ್ಲ. ಧುಂಧುಕಾರಿ ಮನೆಯಲ್ಲಿ ಐದು ಜನ ಸೂಳೆಯರನ್ನಿಟ್ಟುಕೊಂಡು ವಾಸ ಮಾಡುತ್ತಿದ್ದನು. ಅವನು ಬಹಳ ಕ್ರೂರಕಾರ್ಯಗಳನ್ನು ಮಾಡುತ್ತ ಸೂಳೆಯರ ಪೋಷಣೆಯಲ್ಲಿ ಇರತನಾಗಿ ಬುದ್ಧಿಯಿಲ್ಲದವನಾಗಿದ್ದನು. ಒಂದು ಸಲ ಸೂಳೆಯರು ಒಡವೆಗಳು ಬೇಕೆಂದು ಆಸೆಪಟ್ಟರು. ಅದಕ್ಕಾಗಿ ಕಾಮಾಂಧನಾದ ಧುಂಧುಕಾರಿ ಮರಣವನ್ನು ನೆನೆಯದೆ ಮನೆಯಿಂದ ಹೊರಟು ಎಲ್ಲೆಲ್ಲಿಯೋ ಧನವನ್ನು ಅಪಹರಿಸಿಕೊಂಡು ಮನೆಗೆ ಬಂದು ಸೂಳೆಯರಿಗೆ ಒಳ್ಳೆಯ ಬಟ್ಟೆಗಳನ್ನೂ ಕೆಲವು ಒಡವೆಗಳನ್ನೂ ಕೊಟ್ಟನು. ಅಧಿಕವಾದ ಆ ಧನವನ್ನು ನೋಡಿ ರಾತ್ರಿ ಆ ಹೆಂಗಸರೆಲ್ಲರೂ ‘ಇವನು ಪ್ರತಿದಿನ ಕಳ್ಳತನ ಮಾಡುತ್ತಾನೆ. ಆದುದರಿಂದ ಇವನು ರಾಜನ ಕೈಗೆ ಸಿಗುತ್ತಾನೆ. ರಾಜನು ಇವನ ಧನವನುನ ತೆಗೆದುಕೊಂಡು ಇವನಿಗೆ ಮರಣದಂಡನೆ ವಿಧಿಸುತ್ತಾನೆ. ಇದು ಖಂಡಿತ. ಆದುದರಿಂದ ಧನವನ್ನು ಉಳಿಸಿಕೊಳ್ಳಲು ನಾನೇ ರಹಸ್ಯವಾಗಿ ಇವನನ್ನು ಏಕೆ ಕೊಲ್ಲಬಾರದು? ಇವನನ್ನು ಕೊಂದು ಧನವನ್ನು ತೆಗೆದುಕೊಂಡು ಎಲ್ಲಿಗಾದರೂ ಹೋಗಿ ಬಿಡೋಣ” ಎಂದು ನಿಶ್ಚಯಿಸಿ ನಿದ್ರೆಯಲ್ಲಿದ್ದ ಅವನನ್ನು ಹಗ್ಗಗಳಿಂದ ಕಟ್ಟಿ ಅವನ ಕತ್ತಿಗೆ ಪಾಶ ಹಾಕಿ ಅವನನ್ನು ಕೊಲ್ಲಲು ಪ್ರಯತ್ನ ಮಾಡಿದರು. ಆದರೆ ಅವನು ಶೀಘ್ರವಾಗಿ ಸಾಯಲಿಲ್ಲವಾದುದರಿಂದ ಅವರು ಯೋಚನೆ ಮಾಡಿ ಅವನ ಬಾಯಿಯಲ್ಲಿ ಕೆಂಡಗಳನ್ನು ಹಾಕಿದರು. ಬೆಂಕಿಯ ಉರಿಗೆ ಬಹಳ ನೊಂದು ಅದನ್ನು ತಡೆಯಲಾರದೆ ಅವನು ಸತ್ತು ಹೋದನು. ಆ ಸೂಳೆಯರು ಅವನ ಶರೀರವನ್ನು ಒಂದು ಗುಣಿಯಲ್ಲಿ ಹೂತಿ ಬಿಟ್ಟರು. ಹೆಂಗಸರು ಸಾಧಾರಣವಾಗಿ ಸಾಹಸಿಕರು. ಈ ಕೊಲೆಯ ರಹಸ್ಯ ಯಾರಿಗೂ ಗೊತ್ತಾಗಲಿಲ್ಲ. ಆ ಸೂಳೆಯರು ಕೇಳಿದವರಿಗೆ ನಮ್ಮ ಪ್ರಿಯನು ಧನದ ಆಸೆಯಿಂದ ದೂರ ದೇಶಕ್ಕೆ ಹೋಗಿದ್ದಾನೆಂದೂ ಈ ವರ್ಷದೊಳಗೆ ಹಿಂತಿರುಗಿ ಬರುತ್ತಾನೆಂದೂ ಉತ್ತರ ಕೊಟ್ಟರು. ಕೆಟ್ಟ ಸ್ತ್ರೀಯರನ್ನು ಬುದ್ಧಿವಂತನು ಎಂದಿಗೂ ನಂಬಬಾರದು. ಬುದ್ಧಿಯಿಲ್ಲದೆ ಯಾವನಾದರೂ ನಂಬಿದರೆ ಅವನಿಗೆ ತಪ್ಪದೆ ದುಃಖಬರುವುದು. ಕಾಮಿಗಳ ಹೃದಯವನ್ನು ಆಕರ್ಷಿಸುವಂತಹ ಅಮೃತಮಯವಾದ ವಾಕ್ಕುಳ್ಳ ಮತ್ತು ಕತ್ತಿಯ ಅಂಚಿನಂತಹ ಹೃಚಯವುಳ್ಳ ಹೆಂಗಸರಿಗೆ ಪ್ರಿಯನಾದನು? ಬಹು ಪತಿಗಳಾದ ಸೂಳೆಯರು ಧನವನ್ನೆಲ್ಲಾ ಸಂಗ್ರಹಿಸಿಕೊಂಡು ಅಲ್ಲಿಂದ ಹೊರಟುಹೋದಳು. ಕೆಟ್ಟ ಕೆಲಸದಿಂದ ಧುಂಧುಕಾರಿಯು ದೊಡ್ಡ ಪ್ರೇತವಾಗಿಬಿಟ್ಟನು. ಅವನು ಗಾಳಿಯ ರೂಪದಲ್ಲಿ ಹತ್ತು ದಿಕ್ಕುಗಳಲ್ಲೂ, ಮಧ್ಯಪ್ರದೇಶದಲ್ಲೂ, ಸದಾ ಓಡುತ್ತಾ ಚಳಿ, ಬಿಸಿಲುಗಳಿಗೆ ಸಿಕ್ಕಿ ಬಾಧೆಪಡುತ್ತ ಆಹಾರವಿಲ್ಲದೆ ಬಾಯಾರಿಕೆ ಉಳ್ಳವನಾಗಿ ಎಲ್ಲಿಯು ದಿಕ್ಕಿಲ್ಲದವನಾಗಿ “ಅಯ್ಯೋ ವಿಧಿಯೇ” ಎಂದು ಪರಿತಪಿಸುತಿದ್ದನು. ಸ್ವಲ್ಪ ಕಾಲಕ್ಕೆ ಗೋಕರ್ಣನಿಗೆ ಧುಂಧುಕಾರಿ ಸತ್ತುಹೋಗಿದ್ದಾನೆಂದು ತಿಳಿಯಿತು. ಅವನು ಅನಾಥನೆಂದು ತಿಳಿದು ಗೋಕರ್ಣನು ಅವನಿಗೆ ಗಯಾಶ್ರಾದ್ಧವನ್ನು ಮಾಡಿದನು. ಅಲ್ಲದೆ ಆತನು ಯಾವ ಯಾವ ತೀರ್ಥಕ್ಕೆ ಹೋದನೋ ಅಲ್ಲೆಲ್ಲಾ ಅವನಿಗೆ ಶ್ರಾದ್ಧವನ್ನು ಮಾಡಿದನು. ಹೀಗೆ ತಿರ್ಥಯಾತ್ರೆ ಮುಗಿಸಿಕೊಂಡು ಆತನು ತನ್ನ ಊರಿಗೆ ಬಂದು ರಾತ್ರಿ ಯಾರಿಗೂ ಕಾಣಿಸದೆ, ಮನೆಯ ಅಂಗಳದಲ್ಲಿ ಮಲಗಿದ್ದನು. ಆಗ ಧುಂಧುಕಾರಿ ತನ್ನ ಬಂಧುವಾದ ಗೋಕರ್ಣನು ಅಲ್ಲಿ ಮಲಗಿರುವುದನ್ನು ಕಂಡು ರಾತ್ರಿ ಆತನಿಗೆ ತನ್ನ ಭಯಂಕರವಾದ ರೂಪವನ್ನು ತೋರಿಸಿದನು. ಒಂದು ಸಲ ಕುರಿಯ ರೂಪದಲ್ಲೂ ಒಂದು ಸಲ ಆನೆಯ ರೂಪದಲ್ಲೂ ಒಂದು ಸಲ ಕೋಣದ ರೂಪದಲ್ಲೂ ಒಂದು ಸಲ ಇಂದ್ರನ ರೂಪದಲ್ಲೂ ಒಂದು ಸಲ ಅಗ್ನಿಯ ರೂಪದಲ್ಲೂ ಪುನಃ ಮನುಷ್ಯನ ರೂಪದಲ್ಲೂ ಆತ ಕಾಣಿಸಿಕೊಂಡನು. ಈ ವೈಪರೀತ್ಯವನ್ನೂ ನೋಡಿ ಧೈರ್ಯಶಾಲಿಯಾದ ಗೋಕರ್ಣನು ಇವನಾವನೋ ದುರ್ಗತಿಕನಾಗಿರಬೇಕೆಂದುಕೊಂಡು ಅವನನ್ನು ಕುರಿತು ಹೇಳಿದನು.
ಗೋಕರ್ಣನು ಹೇಳಿದನು
ಈ ರಾತ್ರಿ ಸಮಯದಲ್ಲಿ ಭಯಂಕರವಾದ ರೂಪ ತೋರಿಸುತ್ತಿರುವ ನೀನಾರು? ಈ ಸ್ಥಿತಿಯನ್ನು ಏಕೆ ಹೊಂದಿದೆ? ನೀನು ಪ್ರೇತವೇ, ಪಿಶಾಚವೇ ಅಥವಾ ರಾಕ್ಷಸನೇ ಎಂಬುದನ್ನು ತಿಳಿಸು.
ಸೂತನು ಹೇಳಿದನು
ಹೀಗೆ ಆತನು ಕೇಳಲು ಧುಂಧುಕಾರಿಯು ಮೇಲಿಂದ ಮೇಲೆ ಗಟ್ಟಿಯಾಗಿ ಅತ್ತನು. ಅವನು ಮಾತಾಡುವುದಕ್ಕೂ ಶಕ್ತಿಯಿಲ್ಲದೆ ಸನ್ನೆಗಳನ್ನು ಮಾಡಿದನು. ಆಗ ಗೋಕರ್ಣನು ಬೊಗಸೆಯಲ್ಲಿ ನೀರು ತೆಗೆದುಕೊಂಡು ಅವನ ಮೇಲೆ ಎರಚಿದನು. ಅದರಿಂದ ಪಾಪ ಕಳೆದು ಅವನು ಮಾತಾಡತೊಡಗಿದನು.
ಪ್ರೇತವು ಹೇಳಿತು
ನಾನು ‘ಧುಂಧುಕಾರಿ’ ಯೆಂಬ ಹೆಸರಿನ ನಿನ್ನ ಸಹೋದರನು. ನನ್ನ ತಪ್ಪಿನಿಂದ ನಾನು ಬ್ರಾಹ್ಮಣತ್ವವನ್ನೂ ಕಳೆದುಕೊಂಡೆನು. ಬಹಳ ಅಜ್ಞಾನದಲ್ಲಿದ್ದ ನನಗೆ ಕಾರ್ಯಕಾರ್ಯಗಳ ವಿವೇಚನೆಯೇ ಇರಲಿಲ್ಲ. ನಾನು ಜನರನ್ನು ಹಿಂಸಿಸಿದೆ. ಕೊನೆಗೆ ಹೆಂಗಸರಿಂದ ದುಃಖಕರವಾದ ರೀತಿಯಲ್ಲಿ ಕೊಲ್ಲಲ್ಲಪಟ್ಟೆನು. ಆದುದರಿಂದ ನಾನು ಪ್ರೇತತ್ವವನ್ನು ಹೊಂದಿ ಬಹಳ ಹೀನಸ್ಥಿತಿಯಲ್ಲಿದ್ದೇನೆ. ವಿಧಿಯ ಕೈಗೆ ಸಿಕ್ಕ ಗಾಳಿಯ ಆಹಾರದಿಂದ ಜೀವಿಸುತ್ತಿದ್ದೇನೆ. ಎಲೈ ಬಂಧುವೇ, ತಮ್ಮನೇ, ದಯಾಳುವೇ, ನನ್ನನ್ನು ಬಿಡಿಸು. ಎಂದು ಹೇಳಿದ ಅವನ ಮಾತನ್ನು ಕೇಳಿ ಗೋಕರ್ಣನು ಅವನಿಗೆ ಹೇಳಿದನು.
ಗೋಕರ್ಣನು ಹೇಳಿದನು
ನಿನಗಾಗಿ ನಾನು ವಿಧಿಪೂರ್ವಕವಾಗಿ ಗಂಗೆಯಲ್ಲಿ ಪಿಂಡವನುನ ಕೊಟ್ಟೆನು. ಆದರೂ ನಿನೇಕೆ ಪ್ರೇತತ್ವದಿಂದ ಮುಕ್ತನಾಗಲಿಲ್ಲ ಎಂಬುದು ನನಗೆ ಬಹಳ ಆಶ್ಚರ್ಯಕರವಾಗಿದೆ. ಗಯಾ ಶ್ರಾದ್ಧದಿಂದಲೇ ನಿನಗೆ ಮುಕ್ತಿ ಲಭಿಸದಿರುವಾಗ ಇದಕ್ಕೆ ಇನ್ನಾವ ಉಪಾಯವೂ ಇಲ್ಲ. ಪ್ರೇತನೇ, ನಾನೀಗ ಏನು ಮಾಡಬೇಕೆಂಬುದನ್ನು ನೀನು ವಿಸ್ತಾರವಾಗಿ ಹೇಳು.
ಪ್ರೇತವು ಹೇಳಿತು
ನೂರು ಗಯಾಶ್ರಾದ್ಧಗಳನ್ನು ಮಾಡಿದರೂ ನನಗೆ ಪ್ರೇತತ್ವದಿಂದ ಬಿಡುಗಡೆ ಯಾವುದಿಲ್ಲ. ಬೇರೆ ಯಾವುದಾದರೊಂದು ಉಪಾಯವನ್ನು ಈಗ ನೀನು ಯೋಚಿಸು.
ಹೀಗೆ ಪ್ರೇತವು ಹೇಳಿದ ವಾಕ್ಯವನ್ನು ಕೇಳಿ ಗೋಕರ್ಣನಿಗೆ ಆಶ್ಚರ್ಯವುಂಟಾಯಿತು. ನೂರು ಶ್ರಾದ್ಧಗಳಿಂದಲೂ ಮುಕ್ತಿಯಾಗದಿದ್ದರೆ ನಿನ್ನ ಬಿಡುಗಡೆ ಅಸಾಧ್ಯ. ಈಗ ನೀನು ನಿನ್ನ ಸ್ಥಲಕ್ಕೆ ಹೋಗಿ ಅಲ್ಲಿಯೇ ನಿರ್ಭಯವಾಗಿಯಿರು. ನಾನು ವಿಚಾರಮಾಡಿ ನಿನ್ನ ಬಿಡುಗಡೆಗಾಗಿ ಏನಾದರೂ ಮಾಡುತ್ತೇನೆ”. ಎಂದು ಗೋಕರ್ಣನು ಹೇಳಲು ಆ ಮಾತನ್ನು ಕೇಳಿ ಧುಂಧುಕಾರಿ ತನ್ನ ಸ್ಥಾನಕ್ಕೆ ಹೊರಟನು. ಆ ರಾತ್ರಿಯೆಲ್ಲಾ ಗೋಕರ್ಣನು ಏನು ಮಾಡಬೇಕೆಂಬುದನ್ನು ಯೋಚಿಸುತ್ತಿದ್ದನು. ಆದರೂ ಆತನಿಗೆ ಉಪಾಯ ಹೊಳೆಯಲಿಲ್ಲ. ಬೆಳಗ್ಗೆ ಗೋಕರ್ಣನು ಬಂದಿರುವುದನ್ನು ನೋಡಿ ಜನರು ಪ್ರೀತಿಯಿಂದ ಬಂದರು. ರಾತ್ರಿ ನಡೆದ ಸಂಗತಿಯನ್ನು ಗೋಕರ್ಣನವರಿಗೆ ತಿಳಿಸಿದನು. ವಿದ್ವಾಂಸರೂ, ಯೋಗಾಭ್ಯಾಸ ಮಾಡುವವರೂ, ಜ್ಞಾನಿಗಳೂ, ಬ್ರಹ್ಮವಾದಿಗಳೂ, ಶಾಸ್ತ್ರಗಳನ್ನು ನೋಡಿದರು. ಆದರೂ, ಅವರಿಗೆ ಧುಂಧುಕಾರಿಯ ಬಿಡುಗಡೆಗೆ ಮಾರ್ಗ ಕಂಡುಬರಲಿಲ್ಲ. ಕೊನೆಗೆ ವಿದ್ವಾಂಸರು ಅವನ ಮುಕ್ತಿಗಾಗಿ ಸೂರ್ಯ ವಾಕ್ಯವನ್ನು ಕೇಳಬೇಕೆಂದು ಗೋಕರ್ಣನಿಗೆ ಹೇಳಿದರು. ಆಗ ಆತನು ಸೂರ್ಯನ ವೇಗಕ್ಕೆ ಸ್ತಂಭನವನ್ನು ಮಾಡಿ ಸೂರ್ಯನನ್ನು ಕುರಿತು “ಲೋಕಸಾಕ್ಷಿಯಾದ ಸೂರ್ಯದೇವನೇ, ಮುಕ್ತಿಯ ಉಪಾಯವನ್ನು ನನಗೆ ತಿಳಿಸು” ಎಂದು ಪ್ರಾರ್ಥಿಸಿದನು. ಅದನ್ನು ಕೇಳಿ ಸೂರ್ಯನು ದೂರದಿಂದಲೇ ಸ್ಪಷ್ಟವಾಗಿ ಹೀಗೆ ಹೇಳಿದನು “ಶ್ರೀಮದ್ಭಾಗವತದಿಂದ ಮುಕ್ತಿ ಆಗುವುದು. ನೀನು ಅದನ್ನು ಏಳು ದಿನ ವಾಚನ ಮಾಡು”. ಎಂದು ಹೆಳಿದ ಸೂರ್ಯನ ಧರ್ಮ ರೂಪವಾದ ವಾಕ್ಕು ಎಲ್ಲಿರಘೂ ಕೇಳಿಸಿತು. ಆಗ ಎಲ್ಲರೂ “ಪ್ರಯತ್ನದಿಂದ ಇದನ್ನು ಮಾಡಬೇಕು. ಇದು ಮಾಡುವುದು ಸುಲಭ” ಎಂದು ಹೇಳಿದರು. ಗೋಕರ್ಣನು ಹಾಗೆ ಮಾಡಲು ಸಂಕಲ್ಪಿಸಿ ಭಾಗವತವಾಚನಕ್ಕೆ ಏರ್ಪಾಟು ಮಾಡಿದನು. ಅದನ್ನು ಕೇಳುವುದಕ್ಕೆ ದೇಶದಲ್ಲಿ ಇತರ ಗ್ರಾಮಗಳಿಂದಲೂ ಜನ ಬಂದರು. ತಮ್ಮ ಪಾಪಗಳನ್ನು ಕಳೆದುಕೊಳ್ಳುವುದಕ್ಕಾಗಿ ಕುಂಟರೂ, ಕುರುಡರೂ, ಮುದುಕರು, ಅಶಕ್ತರೂ ಬಂದರು. ಜನರ ಗುಂಪು ದೊಡ್ಡದಾಗಿ ಸೇರಿದ್ದನ್ನು ನೋಡಿ ದೇವತೆಗಳಿಗೆ ಆಶ್ಚರ್ಯವುಂಟಾಯಿತು. ಗೋಕರ್ಣನು ಆಸನದ ಮೇಲೆ ಕುಳಿತು ಕಥೆಯನ್ನು ಹೇಳಲು ಪ್ರಾರಂಭ ಮಾಡಿದ ಕೂಡಲೇ ಪ್ರೇತನಲ್ಲಿಗೆ ಬಂದು ತಾನು ಇರುವುದಕ್ಕೆ ಜಾಗವನ್ನು ಅಲ್ಲಿ ಇಲ್ಲಿ ಹುಡುಕಿ ಏಳು ಗ್ರಂಥಿಗಳುಳ್ಳ ಒಂದು ಎತ್ತರವಾದ ಬಿದಿರು ಬೊಂಬನ್ನು ಕಂಡು ಅದರ ಬುಡದಲ್ಲಿದ್ದ ತೂತನ್ನು ಆಶ್ರಯಿಸಿ ಭಾಗವತ ಕಥಾಶ್ರವಣಕ್ಕಾಗಿ ನಿಂತನು. ಅವನು ಗಾಳಿಯ ರೂಪದಲ್ಲಿದ್ದರೆ ಒಂದು ಕಡೆ ನಿಲ್ಲಲು ಸಾಧ್ಯವಿಲ್ಲವೆಂದು ಆ ಬೊಮಿನ್ನು ಪ್ರವೇಶಿಸಿದನು. ಗೋಕರ್ಣನು ವಿಷ್ಣುಭಕ್ತನಾದ ಒಬ್ಬ ಬ್ರಾಹ್ಮಣನನ್ನು ಮುಖ್ಯ ಶ್ರೋತಾರನನ್ನಾಗಿ ಮಾಡಿಕೊಂಡು ಮೊದಲನೆಯ ಸ್ಕಂಧದಿಂದ ಭಾಗವತವನ್ನು ಸ್ಪಷ್ಟವಾಗಿ ವಾಚನ ಮಾಡಿ ತೊಡಗಿದನು. ಮೊದಲನೆಯ ದಿನ ಸಾಯಂಕಾಲಕ್ಕೆ ವಾಚನವನ್ನು ನಿಲ್ಲಿಸಿದಾಗ ಒಂದು ಆಶ್ಚರ್ಯ ನಡೆಯಿತು. ಆ ಬಿದಿರು ಬೊಂಬೆಯ ಒಂದು ಗಂಟು ಒಡೆದು ಶಬ್ದ ಬಂದಿತು. ಅದನ್ನು ಎಲ್ಲರೂ ಕಂಡರು. ಹಾಗೆಯೇ ಮೂರನೇ ದಿನ ಸಾಯಂಕಾಲ ಮೂರನೇ ಗಂಟು ಒಡೆಯಿತು. ಹೀಗೆ ಏಳು ದಿನ ವಾಚನ ಮುಗಿಯುವ ವೇಳೆಗೆ ಏಳು ಗಂಟುಗಳೂ ಒಡೆದು ದ್ವಾದಶ ಸ್ಕಂಧ ಶ್ರವಣ ಮಾಡಿದ ಕೂಡಲೇ ಧುಂಧುಕಾರಿ ಪ್ರೇತತ್ವವನ್ನು ಬಿಟ್ಟನು. ಆತನು ಮೇಘದಂತೆ ಶ್ಯಾಮಲವರ್ಣವುಳ್ಳ ದಿವ್ಯರೂಪವನು ಧರಿಸಿ ತುಲಸೀ ಹಾರವನ್ನು ಹಾಕಿಕೊಂಡಿದ್ದನು. ಪೀತಾಂಬರನಪ್ಪಿದ್ದನು. ಕಿರೀಟ ಕುಂಡಲಗಳನ್ನು ಧರಿಸಿದ್ದನು. ಆತನು ಕೂಡಲೇ ತಮ್ಮನಾದ ಗೋಕರ್ಣನಿಗೆ ನಮಸ್ಕಾರ ಮಾಡಿ ಹೀಗೆಂದು ಹೇಳಿದನು.
“ಎಲೈ ಬಂಧುವೇ, ಕರುಣೆಯಿಂದ ನೀನು ನನ್ನನ್ನು ಪ್ರೇತತ್ವದ ಕಶ್ಮಲದಿಂದ ಬಿಡಿಸಿದೆ. ಪ್ರೇತಪೀಡೆಯನ್ನು ನಾಶಮಾಡುವ ಭಗವಂತನ ಕಥೆ ಧನ್ಯವು. ವಿಷ್ಣು ಲೋಕವನ್ನು ಕೊಡತಕ್ಕ ಸಪ್ತಾಹವು ಸಹ ಧನ್ಯವು. ಸಪ್ತಾಹ ಶ್ರವಣದಲ್ಲಿ ತೊಡಗಿದ ಕೂಡಲೆಯೇ ಸಮಸ್ತ ಪಾಪಗಳೂ ಕಂಪಿಸುವುವು. ಈ ಕಥೆಯು ನಮಗೆ ಕೂಡಲೇ ಮುಕ್ತಿ ಕೊಡತಕ್ಕದ್ದು. ಮನೋವಾಕ್ಕರ್ಮಗಳಿಂದ ಈಗ ಓಣಗಿ ಹೋದದ್ದು ರಸವಂತವಾಗಿ ಮಾಡಲ್ಪಟ್ಟಿತು. ಸ್ಥೂಲವಾದದ್ದು ಲಘುವಾಗಿ ಮಾಡಲ್ಪಟ್ಟಿತು. ಅಗ್ನಿಯು ಸಮಿಧೆಗಳನ್ನು ಹೇಗೆ ಸುಡುತ್ತದೆಯೋ ಹಾಗೆ ಭಾಗವತ ಶ್ರವಣವು ಪಾಪಗಳನ್ನು ಸುಡುತ್ತದೆ. ದೇವಸಭೆಯಲ್ಲಿರುವ ವಿದ್ವಾಂಸರು ಈ ಭಾರತ ವರ್ಷದಲ್ಲಿ ಭಾಗವತ ಕಥೆಯನ್ನು ಕೇಳದಿರುವ ಮನುಷ್ಯರ ಜನ್ಮ ನಿಷ್ಪಲವೆಂದು ಹೇಳಿದ್ದಾರೆ. ಭಾಗವತ ಕಥೆಯಿಲ್ಲದೆ ಮೋಹದಿಂದ ಅಶಾಶ್ವತವಾದ ಶರೀರವನ್ನು ರಕ್ಷಿಸಿ, ಪೋಷಿಸಿ, ಬಲಿಷ್ಠವಾಗಿ ಮಾಡಿದ್ದರಿಂದ ಏನು ಪ್ರಯೋಜನ? ಎಲಬುಗಳು ಈ ಶರೀತಕ್ಕೆ ಸ್ತಂಭಗಳು. ಇವು ಸ್ನಾಯುಗಳಿಂದ ಕಟ್ಟಲ್ಪಟ್ಟಿವೆ. ಇವುಗಳ ಮೇಲೆ ಮಾಂಸ ಮತ್ತು ರಕ್ತ ಮೆತ್ತಲ್ಪಟ್ಟಿವೆ. ಇದರ ಮೇಲೆ ಚರ್ಮದ ಹೊಗಿಕೆ ಇದೆ. ಇದು ಕೆಟ್ಟವಾಸನೆಯುಳ್ಳದ್ದು. ಮಲಮೂತ್ರಗಳಿಗೆ ಪಾತ್ರವು. ಮುದಿತನ, ದುಃಖ, ಇವು ಇದನ್ನು ಬಳಲಿಸುತ್ತವೆ. ಇದು ರೋಗಗಳ ಮನೆ. ಬಹಳ ಆಸೆಯುಳ್ಳದ್ದು. ಇದನು ಎಷ್ಟು ತುಂಬಿದರೂ ತೃಪ್ತಿಯಿಲ್ಲ. ಇದನ್ನು ಧರಿಸಿಸುವುದಕ್ಕೆ ಬಹಳ ಪ್ರಯಾಸಪಡಬೇಕು. ಇದು ಕೆಟ್ಟದ್ದು. ದೋಷಗಳಿಂದ ಕೂಡಿದ್ದು. ಕ್ಷಣ ಭಂಗುರವಾದದ್ದು. ಈ ಶರೀರ ಕೊನೆಗೆ ಕೃಮಿಗಳು ಮತ್ತು ಹಕ್ಕಿಗಳ ಪಾಲಾಗುವುದು. ಅಥವಾ ಭಸ್ಮವಾಗುವುದು. ಇದು ಶರೀರದ ವರ್ಣನೆ. ಇಂತಹ ಅಸ್ಥಿರವಾದ ಶರೀರದಿಂದ ಸ್ಥಿರವಾದ ಕಾರ್ಯವನ್ನೇಕೆ ಸಾಧಿಸಬಾರದು? ಬೆಳಗ್ಗೆ ಮಾಡಿದ ಅನ್ನ ಸಾಯಂಕಾಲಕ್ಕೆ ತಂಗಳಾಗುತ್ತದೆ. ಅಂತಹ ಅನ್ನದಿಂದ ಬೆಳೆಸಲ್ಪಟ್ಟ ಶರೀರ ಹೇಗೆ ನಿತ್ಯವಾಗುತ್ತದೆ? ಸಪ್ತಾಹಶ್ರವಣಮಾಡಿದರೆ ಈ ಲೋಕದಲ್ಲಿ ಶ್ರೀಹರಿ ಹತ್ತಿರಕ್ಕೆ ಬರುತ್ತಾನೆ. ಆದುದರಿಂದ ದೋಷ ನಿವೃತ್ತಿಗಾಗಿ ಇದೇ ಸರಿಯಾದ ಸಾಧನ. ಕಥಾಶ್ರವಣವಿಲ್ಲದ ಜೀವಿಗಳು ನೀರಿನಲ್ಲಿ ಗುಳ್ಳೇಗಳಂತೆಯು, ಜಂತುಗಳಲ್ಲಿ ಕ್ರಿಮಿಗಳಂತೆಯು, ಮರಣಕ್ಕಾಗಿಯೇ ಹುಟ್ಟುತ್ತಾರೆ. ಕಥಾಶ್ರವಣದಿಂದ ಜಡವಸ್ತುವಾದ ಒಂದಗಿದ ಬಿದಿರು ಬೊಂಬೆಯ ಗಂಟುಗಳೇ ಒಡೆದು ಹೋಗಿರುವಾಗ ಮನಸ್ಸಿನ ಗ್ರಂಥಿಗಳು ಒಡೆದು ಹೋಗುವುದರಲ್ಲಿ ಆಶ್ಚರ್ಯವೇನಿದೆ? ಸಪ್ತಾಹ ಶ್ರವಣದಿಂದ ಹೃದಯಗ್ರಂಥಿ ಭೇದಿಸಲ್ಪಡುತ್ತಿದೆ. ಸರ್ವ ಸಂಶಯಗಳೂ ನಿವಾರಣವಾಗುತ್ತವೆ. ಮನುಷ್ಯನ ಕರ್ಮಗಳು ನಶಿಸುತ್ತವೆ. ಮನಸ್ಸು ಸಂಸಾರವೆಂಬ ಅಂಟಿಕೊಂಡಿರುವ ಕೆಸರನ್ನು ತೊಳೆಯುವುದರಲ್ಲಿ ಸಮರ್ಥವಾದ ಭಾಗವತ ಕಥೆಯೆಂಬ ತೀರ್ಥದಲ್ಲಿ ನಿಂತರೆ ಮೋಕ್ಷವೇ ಲಭಿಸುವುದೆಂದು ಪಂಡಿತರ ಅಭಿಪ್ರಾಯ.” ಹೀಗೆ ಧುಂಧುಕಾರಿ ಹೇಳುತ್ತಿರುವಾಗಲೇ ಕಾಂತಿಗಳಿಂದ ಪ್ರಕಾಶಮಾನವೂ ವೈಕುಂಠವಾಸಿಗಳುಳ್ಳದ್ದೂ ಆದ ವಿಮಾನವಲ್ಲಿಗೆ ಬಂತು. ಎಲ್ಲರೂ ಆಶ್ಚರ್ಯದಿಂದ ನೋಡುತ್ತಿರುವಾಗಲೇ ಧುಂಧುಬಿಯ ಮಗನು ಆವಿಮಾನವನ್ನೇರಿದನು. ಆವಿಮಾನದಲ್ಲಿ ವಿಷ್ಣುಭಕ್ತರನ್ನು ನೋಡಿ ಗೋಕರ್ಣನು ಹೀಗೆಂದನು.
ಗೋಕರ್ಣನು ಹೇಳಿದನು
ಇಲ್ಲಿಯೇ ಎಷ್ಟೊಂದು ನಿರ್ಮಲಚಿತ್ತವುಳ್ಳ ಶ್ರೋತಾರರಿದ್ದಾರೆ. ಅವರಿಗೂ ನೀವು ವಿಮಾನಗಳನ್ನು ಏಕೆ ತರಲಿಲ್ಲ? ಎಲ್ಲರೂ ಒಂದೇ ಸಮವಾಗಿ ಶ್ರವಣ ಮಾಡಿದ್ದಾರೆಂದು ನನಗೆ ಕಾಣುತ್ತೆ. ಎಲೈ ಹರಿಪ್ರಿಯರೇ, ಧುಂಧುಕಾರಿಗೆ ಮಾತ್ರ ವಿಮಾನ ತಂದು ಬೇರೆಯವರಿಗೆ ವಿಮಾನ ತರಲಿಲ್ಲವೆಂಬ ಫಲಭೇದವೇಕೆ ಉಂಟಾಯಿತೆಂಬುದನ್ನು ತಿಳಿಸಿ.
ಹರಿದಾಸರು ಹೇಳಿದರು
ಶ್ರವಣದಲ್ಲಿ ಭೇದ ವಿರುವುದರಿಂದ ಇಲ್ಲಿ ಫಲಭೇದವುಂಟಾಗಿದೆ. ಎಲ್ಲರೂ ಶ್ರವಣವನ್ನು ಮಾಡಿದ್ದಾರೆ. ಆದರೆ ಮನನ ಮಾಡುವುದರಲ್ಲಿ ಭೇದವಿದೆ. ಎಲ್ಲರಿಗೂ ಮರ್ಯಾದೆ ಕೊಡಬೇಕೆಂದಿರುವ ಗೋಕರ್ಣನೇ, ಎಲ್ಲರೂ ಭಜನೆ ಮಾಡಿದ್ದರೂ ಈ ಕಾರಣದಿಂದ ಫಲಭೇದವುಂಟಾಗಿದೆ.
ಪ್ರೇತವು ಏಳು ದಿನಗಳು ಪೂರ್ತಿಯಾಗಿ ಉಪವಾಸವಿದ್ದು ಕಥೆಯನ್ನು ಕೇಳಿತು. ಆದುದರಿಂದ ಅದು ಸ್ಥಿರಚಿತ್ತದಿಂದ ಹೆಚ್ಚಾಗಿ ಮನನ ಮುಂತಾದವುಗಳನ್ನು ಮಾಡಿತು. ಜ್ಞಾನವು ದೃಢವಾಗಿಲ್ಲದಿದ್ದರೆ ನಾಶವಾಗುತ್ತೆ. ವಿದ್ಯೆ ಪ್ರಮಾದದಿಂದ ಬಾಧಿತವಾಗುತ್ತದೆ. ಮಂತ್ರವು ಸಂದೇಹವಿದ್ದಲ್ಲಿ ಫಲಿಸುವುದಿಲ್ಲ. ಚಂಚಲ ಮನಸ್ಸಿದ್ದರೆ ಜಪವ್ಯಕ್ಥವಾಗುತ್ತದೆ. ದೇಶದಲ್ಲಿ ವಿಷ್ಣು ಭಕ್ತರಿಲ್ಲದಿದ್ದರೆ ಅದಕ್ಕೆ ಹಾನಿಯುಂಟಾಗುತ್ತದೆ. ಅಪಾತ್ರರೊಂದಿಗೆ ಮಾಡಿದ ಶ್ರಾದ್ಧ ಹತವಾಗುತ್ತದೆ. ಶ್ರೋತ್ರಯನಲ್ಲದವನಿಗೆ ಮಾಡಿದ ದಾನ ಫಲಕಾರಿಯಾಗುವುದಿಲ್ಲ. ಆಚಾರವಿಲ್ಲದಿದ್ದರೆ ಕುಲ ಕೆಟ್ಟುಹೋಗುತ್ತದೆ. ಗುರುವಿನ ಉಪದೇಶದಲ್ಲಿ ನಂಬಿಕೆ, ತನ್ನನ್ನು ತಾನು ದೀನನೆಂದು ಭಾವಿಸಿಕೊಳ್ಳವುದು. ಮನಸ್ಸಿನಲ್ಲಿ ದೋಷಗಳಿಲ್ಲದಿರುವಿಕೆ. ಕಥೆಯಲ್ಲಿ ನಿಶ್ಚಲವಾದ ಆಸಕ್ತಿ ಮುಂತಾದವುಗಳಿದ್ದು ಶ್ರವಣ ಮಾಡಿದರೆ ಅದು ಫಲಕಾರಿಯಾಗುವುದು. ಹೀಗೆ ಶ್ರವಣ ಮಾಡಿದರೆ ಅವರಿಗೆ ಶ್ರವಣಾಂತದಲ್ಲಿ ವೈಕುಂಠವಾಸ ತಪ್ಪದೆ ಲಭಿಸುತ್ತದೆ. ಗೋಕರ್ಣನೇ, ಗೋವಿಂದನು ನಿನಗೆ ಗೋಲೋಕವನ್ನು ತಾನು ಕೊಡಲಿರುವನು. ಹೀಗೆ ಹೇಳಿ ಹರಿದಾಸರು ವಿಷ್ಣುಕೀರ್ತನೆಯನ್ನು ಮಾಡುತ್ತಾ ವೈಕುಂಠಕ್ಕೆ ಹೋದರು.
ಪುನಃ ಗೋಕರ್ಣನು ಶ್ರಾವಣ ಮಾಸದಲ್ಲಿ ಭಗವತದ ಕಥೆಯನ್ನು ಏಳುದಿನಗಳ ಕಾಲ ಹೇಳಿದನು. ಪುನಃ ಅವರೆಲ್ಲರೂ ಕಥೆಯನ್ನು ಕೇಳಿದರು. ನಾರದನೇ, ಕಥೆ ಮುಗಿದಾಗ ಏನು ನಡೆಯಿತೆಂಬುದನ್ನು ಕೇಳು. ಶ್ರೀ ವಿಷ್ಣುದೇವನು ತನ್ನ ಭಕ್ತರೊಡನೆ ವಿಮಾನಗಳಲ್ಲಿ ಆಗಮಿಸಿದನು. ಆಗ ಜಯಶಬ್ದಗಳೂ ನಮಶ್ಯಬ್ದಗಳೂ ಅನೇಕವಾಗಿ ವಿಸ್ತರಿಸಿದವು. ಅಲ್ಲಿ ಶ್ರೀ ವಿಷ್ಣುವು ತಾನೇ ಸಂತೋಷದಿಂದ ಪಾಂಚಜನ್ಯ ಧ್ವನಿಯನ್ನು ಮಾಡಿದನು. ಶ್ರೀ ವಿಷ್ಣುದೇವನು ಗೋಕರ್ಣನನ್ನು ಆಲಿಂಗನ ಮಾಡಿ ತನ್ನಂತೆ ರೂಪವನ್ನಾತನಿಗೆ ಕೊಟ್ಟನು. ಮತ್ತೆ ಒಂದು ಕ್ಷಣದಲ್ಲಿ ಶ್ರೋತೃಗಳನ್ನೆಲ್ಲಾ ಮೇಘವರ್ಣರನ್ನಾಗಿಯು, ಪೀತಾಂಬರ ಧಾರಿಗಳನ್ನಾಗಿಯು, ಕಿರೀಟ ಕುಂಡಲಗಳನ್ನು ಧರಿಸಿದವರನ್ನಾಗಿಯು ಮಾಡಿದನು. ಅಲ್ಲದೇ ಆ ಗ್ರಾಮದಲ್ಲಿದ್ದ ನಾಯಿಗಳು, ಚಂಡಾಲರು, ಮುಂತಾದ ಎಲ್ಲ ಜೀವಿಗಳನ್ನೂ ಗೋಕರ್ಣನ ಕೃಪೆಯಿಂದ ಆಗ ವಿಮಾನದಲ್ಲಿ ಕುಳ್ಳರಿಸಿಕೊಳ್ಳಲಾಯಿತು. ಅವರೆಲ್ಲರೂ ಯೋಗಿಗಮ್ಯವಾದ ಗೋಲೋಕಕ್ಕೆ ಕಳುಹಿಸಲ್ಪಟ್ಟರು. ಗೋಪಾಲನಾದ ಶ್ರೀ ಹರಿಯು ಭಕ್ತವತ್ಸಲನಾಗಿ ಗೋಕರ್ಣನನ್ನು ತನ್ನೊಡನೆ ಕರೆದುಕೊಂಡು ಗೋಪರಿಗೆ ಪ್ರಿಯವಾದ ಗೋಲೋಕಕ್ಕೆ ತೆರಳಿದನು. ಹಿಂದೆ ರಾಮನ ಜೊತೆಯಲ್ಲಿ ಅಯೋಧ್ಯಾವಾಸಿಗಳೆಲ್ಲರೂ ವೈಕುಂಠಕ್ಕೆ ಹೇಗೆ ಹೋದರೋ ಹಾಗೆ ಅವರೆಲ್ಲರೂ ಕೃಷ್ಣನ ಜೊತೆಯಲ್ಲಿ ಯೋಗಿ ದುರ್ಲಭವಾದ ಗೋಲೋಕಕ್ಕೆ ಕರೆದೊಯ್ಯಲ್ಪಟ್ಟರು. ಶ್ರೀಮದ್ಭಾಗವರ ಶ್ರವಣದಿಂದ ಅವರು ಎಲ್ಲಿ ಸೂರ್ಯ ಚಂದ್ರರಿಗೂ ಸಿದ್ಧರಿಗೂ ಸಹ ಪ್ರವೇಶವಿಲ್ಲವೋ ಅಂತಹ ಲೋಕಕ್ಕೆ ಹೋದರು.
ಸುಕ್ತಾಹ ಯಜ್ಞದ ಕಥೆಯ ಉಜ್ವಲ ಫಲವನ್ನು ಈಗ ನಿನಗೆ ಹೇಳುತ್ತಿದ್ದೇವೆ. ಈ ಗೋಕರ್ಣನ ಕಥೆಯನ್ನು ಯಾರು ಆಸಕ್ತಿಯಿಂದ ಕೇಳುವರೋ ಅವರಿಗೆ ಪುನರ್ಜನ್ಮವಿಲ್ಲ. ಗಾಳಿ, ನೀರು, ಎಲೆ ಇವುಗಳನ್ನಾಹಾರ ಮಾಡಿಕೊಂಡು ದೇಹ ಶೋಷಣಮಾಡಿ ಚಿರಕಾಲ ತಪಸ್ಸು ಮಾಡಿದರೊ ಅಥವಾ ಯೋಗಾಭ್ಯಾಸ ಮಾಡಿದರೂ ಯಾವ ಗತಿ ಸಿಗುವುದಿಲ್ಲವೋ ಆ ಗತಿಯನ್ನು ಸಪ್ತಾಹದ ಕಥೆಯನ್ನು ಕೇಳುವುದರಿಂದ ಹೊಂದಬಹುದು.
ಈ ಪುಣ್ಯವಾದ ಇತಿಹಾಸವನ್ನು ಚಿತ್ರಕೂಟದಲ್ಲಿರುವ ಮುನೀಶ್ವರನಾದ ಶಾಂಡಿಲ್ಯನು ಬ್ರಹ್ಮಾನಂದದ ಪರಿಪ್ಲುತನಾಗಿ ಓದುತ್ತಾನೆ.
ಈ ಶ್ರೇಷ್ಠ ಮತ್ತು ಪವಿತ್ರವಾದ ಕಥೆಯನ್ನು ಒಂದು ಸಲ ಕೇಳಿದರೂ ಪಾಪಗಳು ನಶಿಸುವುವು. ಇದನ್ನು ಶ್ರಾದ್ಧದಲ್ಲಿ ಓದಿದರೆ ಪಿತೃದೇವತೆಗಳಿಗೆ ತೃಪ್ತಿವುಂಟಾಗುವುದು. ಸದಾ ಚೆನ್ನಾಗಿ ಓದುವುದರಿಂದ ಮೋಕ್ಷ ಲಭಿಸುವುದು.
ಎಂಬಲ್ಲಿಗೆ ಶ್ರೀಪದ್ಮಪುರಾಣದ ಉತ್ತರ ಖಂಡದಲ್ಲಿನ ಶ್ರೀಮದ್ಭಾಗವತ ಮಹಾತ್ಮ್ಯದಲ್ಲಿ ಗೋಕರ್ಣ ಮೋಕ್ಷವರ್ಣನವೆಂಬ ಐದನೇ ಅಧ್ಯಾಯವು ಮುಗಿಯಿತು.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)