Article of the Month October 2019
ಗಾಯತ್ರಿ
1-11-1993
(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)
ಇದುವರೆಗೂ ಚರ್ಚಿಸಿದ ವಿಶ್ವದಲ್ಲಿನ ಮೂಲ ಭೂತವಾದ ಮೂರು ಭೇದಗಳಾದ ಸತ್ತು, ಚಿತ್ತು, ಮತ್ತು ಆನಂದ, ಇವುಗಳನ್ನು ಹಿಂದೆ ‘ವಸ್ತುಗಳು’ ಎಂಬ ಶೀರ್ಷಿಕೆಯಲ್ಲಿ ಕೊಡಲಾಗಿತ್ತು. ಇದೇ ಶೀರ್ಷಿಕೆಯಲ್ಲಿನ ಇತರ ವಿಷಯಗಳನ್ನು ಕುರಿತು ಚರ್ಚೆಯನ್ನು ಮುಂದುವರಿಸೋಣ.
ಸೂರ್ಯ, ಚಂದ್ರ, ಅಗ್ನಿ
ಈ ಮೂರೂ ಬೆಳಗುವ ವಸ್ತುಗಳು. ಆದರೆ ಇವುಗಳಲ್ಲಿ ಅನೇಕ ಭೇದಗಳಿವೆ. ಸೂರ್ಯನು ಮತ್ತು ಅಗ್ನಿ ತಾವೇ ಬೆಳಗುವ ವಸ್ತುಗಳು. ಚಂದ್ರನು ಸ್ವಪ್ರಕಾಶರಹಿತನು. ಸೂರ್ಯನ ಪ್ರಕಾಶ ಬೀಳುವುದರಿಂದ ಬೆಳಗುವವನು. ಸೂರ್ಯನು ಸದಾ ಬೆಳಗುತ್ತಿರುವವನು. ಅದರೆ ಅಗ್ನಿ ಅಲ್ಪ ಕಾಲ ಬೆಳಗಿ ಶಮನವಾಗುತ್ತದೆ. ಸೂರ್ಯನು ಅತಿ ದೊಡ್ಡ ಮತ್ತು ಇತರ ಎಲ್ಲ ವಸ್ತುಗಳಿಗೆಲ್ಲಾ ಮೂಲಭೂತವಾದ ವಸ್ತು. ಅಗ್ನಿ ಅತಿ ಚಿಕ್ಕ ವಸ್ತು. ಸೂರ್ಯನು ಒಬ್ಬನೇ. ಅಗ್ನಿಗಳು ಅಸಂಖ್ಯಾತಗಳು. ಸೂರ್ಯನು ರಾತ್ರಿ ಕಾಣುವುದೇ ಇಲ್ಲ, ಚಂದ್ರನು ರಾತ್ರಿ ಹೊತ್ತು ಮಾತ್ರ ಕಾಣಿಸಿಕೊಂಡರೂ ಭೂಮಿಯಲ್ಲಿರುವ ನಮಗೆ ಕ್ರಮೇಣ ಹೆಚ್ಚುತ್ತ ತಗ್ಗುತ್ತ ಕಾಣಿಸಿಕೊಳ್ಳುತ್ತಾನೆ. ಸೂರ್ಯ ಚಂದ್ರರು ನಮ್ಮ ವಶದಲ್ಲಿಲ್ಲ. ಅಗ್ನಿ ನಮ್ಮ ವಶದಲ್ಲಿದೆ ಸೂರ್ಯನ ಬೆಳಕು ಅತಿ ತೀಕ್ಷ್ಣ, ಅಗ್ನಿಯ ಬೆಳಕು ಹಿತಕರ, ಚಂದ್ರನ ಬೆಳಕು ಆಹ್ಲಾದಕರ. ಸೂರ್ಯನೂ ಚಂದ್ರನೂ ಗುಂಡಾಗಿರುತ್ತಾರೆ. ಅಗ್ನಿ ಕೆಳಗಡೆ ಅಗಲವಾಗಿದ್ದು ಮೇಲಕ್ಕೆ ಶಿಖಾಕಾರವಾಗಿ ಹರಡುತ್ತೆ. ಸೂರ್ಯ ಚಂದ್ರರು ಕೆಳಗಿನಿಂದ ಮೇಲಕ್ಕೆ ಬಂದು ಪುನಃ ಕೆಳಗೆ ಬರುತ್ತಾರೆ. ಅಗ್ನಿ ಯಾವಾಗಲೂ ಮೇಲಕ್ಕೆ ಮಾತ್ರ ಬೆಳೆಯುತ್ತಾನೆ. ಸೂರ್ಯ ಚಂದ್ರರಲ್ಲಿ ಹೊಗೆಯಿಲ್ಲ. ಅಗ್ನಿಯಲ್ಲಿ ಹೊಗೆಯಿದೆ.
ಚಂದ್ರನಿಗೂ ಅಗ್ನಿಗೂ ಸಹ ಸೂರ್ಯನೇ ಮೂಲ. ಆದುದರಿಂದ ಸೂರ್ಯನು ವಿಶ್ವಮೂಲವಾದ ಪರಮಾತ್ಮನಿದ್ದಂತೆ. ಅಗ್ನಿಗೆ ಸೂರ್ಯನಂತೆ ಸ್ವಪ್ರಕಾಶವಿದ್ದರೂ ಅತ್ಯಲ್ಪ ನಾನಾತ್ವವಿರುವುದಾದುದರಿಂದ ಜೀವಾತ್ಮನನ್ನು ಸೂಚಿಸುತ್ತಾನೆ. ಸೂರ್ಯನೆ ಚಂದ್ರನಿಗೂ ಮೂಲ. ಒಬ್ಬನಾದ ಆತನು ಈ ರೀತಿಯಾಗಿ ಎರಡಾಗಿದ್ದಾನೆ. ಬೇರೆ ಬೇರೆ ನೀರಿನ ಪಾತ್ರೆಗಳಲ್ಲಿ ಬೇರೆ ಬೇರೆ ಪ್ರತಿಬಿಂಬಿಸುವ ಸೂರ್ಯ ಚಂದ್ರರಂತೆ, ಈ ಸೂರ್ಯ ಚಂದ್ರರು ಒಬ್ಬೊಬ್ಬ ಜೀವಿಯ ದೇಹದಲ್ಲೂ ಆಧಾರವಾಗಿ ಪ್ರತಿಬಿಂಬಿಸುತ್ತಿದ್ದಾರೆ. ಇವರು ನಮ್ಮ ವಶದಲ್ಲಿಲ್ಲದೆ ನಮ್ಮ ದೇಹ, ಪ್ರಾಣ, ಬುದ್ಧಿ ಚೈತನ್ಯ ಇತ್ಯಾದಿಗಳೆಲ್ಲವನ್ನೂ ನಡೆಸುತ್ತಿದ್ದಾರೆ. ಸೂರ್ಯನು ತೀಕ್ಷ್ಣತೆಯಿಂದ ಜೀವ ವ್ಯಾಪಾರದಲ್ಲಿ ಶಕ್ತಿಯನ್ನು ಒದಗಿಸುತ್ತಿರುವಾಗ ಚಂದ್ರನು ತಣ್ಣಗಿರುವ ತನ್ನ ಪ್ರಕಾಶದಿಂದ ಆನಂದವನ್ನು ಕೊಡುತ್ತಿದ್ದಾನೆ. ಹೀಗೆ ಈ ಎರಡು ಶಕ್ತಿಗಳೂ ಬಿಗಿ, ಸಡಿಲ, ಈ ರೂಪಗಳಲ್ಲಿ (ಸೂರ್ಯನಾಡೀ ಚಂದ್ರನಾಡೀ) ಕೆಲಸ ಮಾಡುತ್ತಿದೆ. ಈ ಕೆಲಸ ಜೀವಿಯ ವಶದಲ್ಲಿಲ್ಲ. ಇವುಗಳ ನಡುವೆ ಜೀವಿಯ ವಶದಲ್ಲಿರುವಂತೆ ಭಾಸಮಾನವಾಗಿರುವ ಶಕ್ತಿಯೇ ಅಗ್ನಿ. ಜೀವಿಗಳೆಲ್ಲಾ ಈ ಅಗ್ನಿ ಇದ್ದರೂ ಮಾನವರಲ್ಲಿ ಇದು ಸ್ಪಷ್ಟವಾಗಿದೆ. ಇದರ ವರ್ಣನೆಯನ್ನು ನಾವು ಋಗ್ವೇದದ ಮೊದಲನೆಯ ಮಂತ್ರದಲ್ಲಿ ಕಾಣಬಹುದು.
“ಅಗ್ನಿಂ, ಈಳೇ, ಪುರೋಹಿತಂ, ಯಜ್ಞಸ್ಯದೇವಮ ಋತ್ವಿಜಂ, ಹೋತಾರಂ, ರತ್ನಧಾತಮಂ.” ಇದರಲ್ಲಿ, ಮಾನವಾಂತರ್ಗತವಾಗಿ ಜೀವಾತ್ಮದ ವಿಜೃಂಭಣೆಯಾಗಿರುವ ಈ ಅಗ್ನಿ ತತ್ವದ ವರ್ಣನೆಯು ಅದ್ಭುತವಾದ ರೀತಿಯಲ್ಲಿ ಮಾಡಲ್ಪಟ್ಟಿದೆ. ಇದು ಮುಂದೆ ಬೆಳೆದು ಸುಷುಮ್ನಾ ನಾಡಿಯಲ್ಲಿನ ಚಕ್ರಗಳ ಮೂಲಕ ಮೇಲಕ್ಕೆ ಹೋಗಿ ಮುಕ್ತಿಯನ್ನು ಕೊಡುವ ಸಮರ್ಥತೆಯನ್ನು ಸಹ ಹೊಂದಿರುತ್ತದೆ, ಎಂಬುದಕ್ಕೆ ರಾಮಾಯಣದ ಅಂತರಾರ್ಥದಲ್ಲಿ ಬರುವ ಲಂಕಾದಹನ, ಸೀತಾಗ್ನಿ ಪ್ರವೇಶ ಇತ್ಯಾದಿಗಳ ಘಟ್ಟಗಳು ನಿದರ್ಶನವಾಗಿವೆ. ಸೂರ್ಯಚಂದ್ರರ ತತ್ವಗಳು ಸಂಕಲ್ಪಾತೀತವಾದ ವ್ಯಾಪಾರಕ್ಕೆ (Involuntary functions) ಅನ್ವಯಿಸಿದರೆ ಅಗ್ನಿತತ್ವವು ಸಂಕಲ್ಪ ಪೂರ್ವಕ ವ್ಯಾಪಾರಕ್ಕೆ (Voluntary functions) ಅನ್ವಯಿಸುವುದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿಯೇ ಮೇಲ್ಕಂಡ ಮಂತ್ರದಲ್ಲಿ ಅಗ್ನಿಯ ಮೊದಲನೇ ವಿಶೇಷಣವು “ಪುರೋಹಿತ” ಎಂಬುದು ಪುರಾ+ಊಹಿತ ಎಂದರೆ ಮುಂಚಿತವಾಗಿ ಊಹಿಸಲ್ಪಟ್ಟಿರುವುದು ಎಂದು ಅರ್ಥ. ಇದು ಈ ವಿಷಯವನ್ನು ತಾನೆ ತಿಳಿಸುತ್ತಿರುವುದು? ಪುರಃ+ಹಿತ ಎಂಬ ಅರ್ಥದಲ್ಲಿ ಮುಂದಕ್ಕೆ ಇಡಲ್ಪಟ್ಟದ್ದು ಎಂಬ ಅರ್ಥವು ಬರುತ್ತದೆ. ಈ ಎರಡು ಅರ್ಥಗಳಿಂದ ನಮ್ಮಲ್ಲಿ ಅಗ್ನಿತತ್ವಕ್ಕೆ ಸೇರಿದ ಸಂಕಲ್ಪವು ಪೂರ್ವಭಾವಿಯಾಗಿ ಊಹಿಸಲ್ಪಟ್ಟಿರುವುದೂ, ಮುಂದಕ್ಕೆ ಕೊಂಡೊಯ್ಯಲ್ಪಟ್ಟಿರುವುದೂ ಆಗಿದೆ ಎಂಬ ಭಾವವು ಬರುತ್ತದೆ. ಅಲ್ಲಿಂದ ಮುಂದಿನ ಕಾರ್ಯವನ್ನು ಮುಂದಿನ ವಿಶೇಷಣವಾದ “ಯಜ್ಞಸ್ಯದೇವ” ತಿಳಿಸುತ್ತದೆ. ಯಜ್ಞ ಶಬ್ದವು ‘ಯಾಜ್’ ಎಂಬ ಭಾತುವಿನಿಂದ ಬಂದಿರುತ್ತದೆ. ಇದಕ್ಕೆ “ಯಜದೇವ ಪೂಜಾ ಸಂಗತಿಕರಣದಾನೇಷು” ಎಂಬುದು ಧಾತುಸಾರ. ಇದರಲ್ಲಿ “ಸಂಗತಿಕರಣ” ಎಂಬ ಅರ್ಥವಿರುವುದನ್ನು ಗಮನಿಸಬೇಕು. ಇದಕ್ಕೆ ಸಾಂಗತ್ಯವನ್ನು ಮಾಡುವುದು (to associate with) ಎಂಬ ಅರ್ಥವಿರುವುದರಿಂದ ನಮ್ಮ ಸಂಕಲ್ಪಗಳು ಹಿಂದಿನ ಕರ್ಮ ಸಂಸ್ಕಾರವನ್ನನುಸರಿಸಿಕೊಂಡು ಇರುವುವೆಂದೂ, ಭಾವಗಳು ಯಾವಾಗಲೂ ಶಬ್ದರೂಪಕ್ಕೆ ಬರುವಾಗ “ಸಾದೃಶ್ಯ”ವನ್ನು ಹೊಂದಿರುತ್ತವೆಂದೂ ತಿಳಿದುಬರುತ್ತಿದೆ. ಭಾಷೆ ಇರುವುದೇ ಸಾದೃಶ್ಯಗಳ ಮೇಲೆ. “ಹಸ್ತಗತ”ವಾಯಿತು ಎಂದರೆ ವಶಕ್ಕೆ ಬಂತು ಎಂಬ ಭಾವವು ಸಾದೃಶ್ಯದ ಮೇಲೆ ತಾನೆ ಬಂದಿರುವುದು. ಈ ತರದ “ಸಾದೃಶ್ಯ”ಗಳ associations ರೂಪದಲ್ಲಿ ನಮ್ಮ ಸಂಕಲ್ಪಗಳು ವ್ಯಕ್ತವಾಗುತ್ತವೆ ಮತ್ತು ಹೊಸ ಸಾಂಗತ್ಯಗಳನ್ನು ಸೃಷ್ಟಿ ಮಾಡುತ್ತಿರುತ್ತವೆ ಎಂಬ ಭಾವವು “ಯಜ್ಞಸ್ಯದೇವ” ಎಂಬುದರಲ್ಲಿದೆ. ಇಲ್ಲಿ ‘ದೇವ’ ಶಬ್ದವಿರುವುದರಿಂದ ಈ ಕೆಲಸ ಯಾವುದೋ ದೈವೀಶಕ್ತಿಯಿಂದ ಅದಷ್ಟಕ್ಕದೇ ನಡೆದುಹೋಗುತ್ತದೆ ಎಂಬ ಭಾವನೆಯು ಇಲ್ಲಿದೆ. ಅಲ್ಲದೆ ಸಾಂಗತ್ಯ ಮತ್ತು ದೇವಭಾವಗಳು ಪ್ರೇಮ ತತ್ವದ ದ್ಯೋತಕಗಳೂ ಆಗಿವೆ. ಮೂರನೇ ವಿಶೇಷಣವಾದ “ಋತ್ವಿಜೆ’ ಎಂಬುದರ ಅರ್ಥ ಋತುವನ್ನು (order) ಉಂಟುಮಾಡುವುದು ಈ ಅಗ್ನಿತತ್ವ ಎಂಬುದು. ಇದಾದ ಮೇಲೆ ನಡೆಯುವ ಕಾರ್ಯ ಮುಂದಿನ ವಿಶೇಷಣವಾದ “ಹೋತೃ” ತಿಳಿಸುತ್ತದೆ. “ಹುದಾನಾದನಯೋಃ” ಎಂಬ ಧಾತು ಪಾಠದಿಂದಲೂ ಮತ್ತು ಕರ್ತೃವಾಚಕವಾದ “ತೃ” ಪ್ರತ್ಯಯದಿಂದಲೂ ಈ ವಿಶೇಷಣವು ನಾನು ಇತರರಿಗಾಗಿ ಈ ಸಂಕಲ್ಪ ಮಾಡುತ್ತಿದ್ದೇನೆ. ಇದರ ಫಲ ನಾನು ತಿನ್ನುತ್ತೇನೆ. ಎಂಬ ಭಾವನೆ ಬರುತ್ತದೆ. ಮುಂದಿನ ವಿಶೇಷಣವು “ರತ್ನ ಧಾತಮ”. “ರತ್ನ” ಶಬ್ದವು “ರಮ್” ಧಾತುವಿನಿಂದ ಬಂದಿದೆ. ಆನಂದವನ್ನು ಕೊಡುವುದರಲ್ಲಿ ಉತ್ಕೃಷ್ಟವಾದುದು ಎಂದು ಇದರ ಅರ್ಥ. ಇದಲ್ಲದೆ ಅಗ್ನಿಯುವಾಕ್ಕಿಗಿ ಅಧಿದೇವತೆ ಎಂಬುದಕ್ಕೆ ಅನೇಕ ಆದಾರಗಳಿವೆ.
ಹೀಗೆ ಈ ಅಗ್ನಿತತ್ವವು ಮಾನವರ ಸಂಕಲ್ಪ ಶಕ್ತಿಗೆ ಸಂಬಂಧಿಸಿ ವಾಕ್ಯಕ್ತಿ, ಪ್ರೇಮಶಕ್ತಿ, ಧರ್ಮ, ಪುಣ್ಯಫಲಪ್ರಾಪ್ತಿ, ಪರೋಪಕಾರ, ಉತ್ತಮವಾದ ಆನಂದ ಇವುಗಳ ದ್ಯೋತಕವಾಗಿದೆ. ಆದುದರಿಂದಲೇ ಅಗ್ನಿಯ ಯಜ್ಞಗಳೂ, ಅಗ್ನಿತತ್ವದ ಯಜ್ಞಗಳೂ ವೈದಿಕ ಸಂಪ್ರದಾಯದಲ್ಲಿ ತುಂಬಿರುವುದು.
ಈ ಸಂದರ್ಭದಲ್ಲಿ ‘ಅಗ್ನಿ’ ಎಂದರೆ ‘ಭೂಮಿ’ ಎಂಬ ಅರ್ಥವು ಸಹ ಬರುತ್ತದೆ ಎಂಬ ವಿಷಯವನ್ನು ಸಹ ನಾವು ಗಮನಿಸಬೇಕು. ಸೂರ್ಯ, ಭೂಮಿ, ಚಂದ್ರ – ಇವು ನಮ್ಮ ಭೌತಿಕ ಜಗತ್ತಿಗೆ ಸಂಬಂಧಿಸಿದ ಮೂಲ ವಸ್ತುಗಳಲ್ಲವೇ. ಭೂಮಿಯು ಒಂದು ಅಗ್ನಿಗೊಳವೆಂದು ಎಲ್ಲರಿಗೂ ತಿಳಿದೇ ಇದೆ. ಅಗ್ನಿಪರ್ವತಗಳೇ ಇದಕ್ಕೆ ಸಾಕ್ಷಿ. ಮೇಲ್ಕಂಡ ಋಗ್ವೇದದ ಮೊದಲನೇ ಮಂತ್ರವನ್ನು ಭೂಮಿಯ ಪರವಾಗಿಯು ಅರ್ಥೈಸಬಹುದು.
ಪುರೋಹಿತ ಎಂದರೆ ಮುಂದಿನ ಭಾಗದಲ್ಲಿ ಹಿತವಾಗಿರುವುದು. ಭೂಮಿಯ ಮೇಲಿನ ಭಾಗ ಆರಿ ಹಿತವಾಗಿದೆ. ಯಜ್ಞಸ್ಯದೇವ ಎಂಬುದು ಆರಿ ಹಿತಕರವಾದ ಮೇಲಿನ ಭಾಗದಲ್ಲಿ ಜೀವಿಗಳಿಗೆ ಬೇಕಾದ ಎಲ್ಲ ವಸ್ತುಗಳನ್ನೂ ಕೊಡುತ್ತಿರುವುದು ಎಂಬ ಭಾವವನ್ನು ಸೂಚಿಸುತ್ತದೆ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)