Article of the Month September 2019
ಗಾಯತ್ರಿ
1-9-1993
(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)
ಗಾಯತ್ರಿಯಲ್ಲಿನ ಮೂರು ಪಾದಗಳು ವಿಶ್ವದಲ್ಲಿರುವ ವಿವಿಧ ರೀತಿಯ ತ್ರಿವರ್ಗಗಳನ್ನು ಸೂಚಿಸುತ್ತದೆ. ಮೊದಲು ಸತ್ತು, ಚಿತ್ತು, ಆನಂದ ಎಂಬಿವುಗಳನ್ನು ಕುರಿತು ಆಲೋಚಿಸೋಣ. ನಮ್ಮ ಇಂದ್ರಿಯಗಳಿಗೆ ಗೋಚರಿಸುತ್ತಿರುವ ವಿಶ್ವದ ಅಂಶವೇ ‘ಸತ್ತು’ ಎಂದು ಸ್ಥೂಲವಾಗಿ ಹೇಳಬಹುದು. ಅದರ ಹಿಂದೆ ಸೂಕ್ಷ್ಮವಾಗಿ ಇಂದ್ರಿಯಗಳಿಗೆ ಅಗೋಚರವಾಗಿ ತರ್ಕದಿಂದ ಊಹಿಸಿಕೊಳ್ಳಲು ಸಾಧ್ಯವಾದ ವಿಶ್ವದ ವ್ಯಾಪಾರವೇ ಚಿತ್ತು. ಅದಕ್ಕೆ ಕಾರಣವಾಗಿ ಎಂದರೆ ಆ ವಿಶ್ವ ವ್ಯಾಪಾರವನ್ನು ಮಾಡಿಸುತ್ತಿರುವ ಮೂಲಭೂತವಾದ ಏಕೈಕ ತತ್ವವೇ ಆನಂದ.
ಗಾಯತ್ರಿಯ ಮೊದಲನೇ ಪಾದದ ಮೊದಲನೇ ಶಬ್ದ ತತ್ ಎಂದರೆ ಅದು. ಇದು ನಪುಂಸಕ ಲಿಂಗದಲ್ಲಿ ಇರುವುದರಿಂದ ನಿರ್ಜೀವ ಪದಾರ್ಥದ ಸಂಕೇತವೆಂದು ಭಾವಿಸಲು ಅವಕಾಶವುಂಟು. ದೂರದಲ್ಲಿದ್ದು ಅಂತಹ ಅನೇಕ ಪದಾರ್ಥಗಳಲ್ಲಿ ಒಂದಾಗಿರುವುದು ಎಂಬ ಭಾವನೆಗೂ ಅವಕಾಶವಿದೆ. ಅನೇಕ ಪದಾರ್ಥಗಳಲ್ಲಿ ಒಂದಾಗಿರುವಾಗಿರುವಾಗಲೇ ನಾವು ‘ಅದು’ ಎಂದು ಉದ್ದಿಷ್ಟವಾದುದನ್ನು ತೋರಿಸಬೇಕಾಗುತ್ತದೆಯಲ್ಲವೇ. ಸವಿತುಃ ಎರಡನೇ ಪದ ಸೂರ್ಯನನ್ನು ಸೂಚಿಸುತ್ತಿದೆ. ಅದೂ ಅಲ್ಲದೇ ಗಾಯತ್ರೀ ಮಂತ್ರಕ್ಕೂ ಸೂರ್ಯೋದಯ, ಮಧ್ಯಾಹ್ನ, ಸೂರ್ಯಾಸ್ತಮಯ ಇವುಗಳಿಗೂ ಸಂಬಂಧಿಸಿರುವುದು ಎಲ್ಲರಿಗೂ ತಿಳಿದೇ ಇರುತ್ತದೆ. ಇಲ್ಲಿ ತತ್ ಎಂಬುದು ಸೂರ್ಯನಿಗೆ ಅನ್ವಯಿಸಿ ಹೇಳಿರುವ ಪದ. ಈ ಸೂರ್ಯನನ್ನು ಪ್ರತ್ಯೇಕವಾಗಿ “ಅದು” ಎಂದು ತೋರಿಸುವುದರಿಂದ ಇಂತಹ ಸೂರ್ಯ
ಸದೃಶವಾದ ನಕ್ಷತ್ರಗಳಲ್ಲಿ ಒಂದಾಗಿ ನಮಗೆ ಸಮೀಪವಾಗಿ ನಮಗೆ ಸಂಬಂಧಿಸಿರುವ ನಕ್ಷತ್ರವಾದ ಸೂರ್ಯನು ಎಂಬ ಭಾವ ಬರುತ್ತದೆ.
ಸವಿತುಃ ಎಂಬುದು “ಸೂ” ಎಂಬ ಧಾತುವಿನಿಂದ ಬಂದಿದೆ. “ಸೂ” ಎಂದರೆ ಪ್ರಾಣಿ ಗರ್ಭದಿಂದ ಹೊರಕ್ಕೆ ಸೂರ್ಯನ ಗರ್ಭದಿಂದ ಹೊರಕ್ಕೆ ತಳ್ಳಲ್ಪಟ್ಟಿರುವ ವಸ್ತು. ಆ ಸಮಯದಲ್ಲಿ ವಿಕರ್ಷಣವಿತ್ತು. ಆದರೆ ಹೊರ ಹೋದ ಕೂಡಲೆ ಅದನ್ನು ಆಕರ್ಷಿಸಲು ಪ್ರಾರಂಭಿಸುತ್ತಾನೆ ಸೂರ್ಯನು. ಈ ತಳ್ಳಿ ಹಾಕುವಶಕ್ತಿ ಮತ್ತು ಆಕರ್ಷಿಸುವ ಶಕ್ತಿಗಳ ಪ್ರಭಾವದಿಂದಲೇ ಭೂಮಿ ತನ್ನ ಸುತ್ತಲೂ ತಾನು ತಿರುಗುತ್ತಾ ಸೂರ್ಯನ ಸುತ್ತಲೂ ತಿರುಗುತ್ತಿರುವುದು.
ಸವಿತುಃ ಎಂಬ ಶಬ್ದವು ಹೊರ ಚಿಮ್ಮುವುದು ಎಂಬ ಅರ್ಥವನ್ನು ಕೊಡುತ್ತಿದೆ. ಆದರೆ ಭೂಮಿ ಸೂರ್ಯನ ಕಡೆಗೇ ಆಕರ್ಷಿತವಾಗಿದೆ ಮತ್ತು ತನ್ನ ಸುತ್ತಲೂ ತಿರುಗುತ್ತ ಆತನ ಸುತ್ತಲೂ ತಿರುಗುತ್ತಿದೆ. ಭೂಮಿಯ ಈ ಆಕರ್ಷಣ ಮತ್ತು ಸುತ್ತಲೂ ತಿರುಗುವಿಕೆ ಎಂಬ ಭಾವಗಳನ್ನು “ವರೇಣಿಯಂ” ಎಂಬ ಪದವು ಸೂಚಿಸುತ್ತಿದೆ. ಇದರ ಮೂಲ ಧಾತುವಾದ “ವೃ” ಎಂಬುದಕ್ಕೆ ಆಕರ್ಷಣೆಯನ್ನು ಹೊಂದುವುದು (ವರಿಸುವುದು) ಮತ್ತು ಮುಚ್ಚುವುದು (ಆವರಿಸುವುದು) ಮತ್ತು ಸುತ್ತಲೂ ತಿರುಗುವುದು ಎಂಬ ಅರ್ಥಗಳಿವೆ. ಭೂಮಿಯು ಸೂರ್ಯನನ್ನು ಮುಚ್ಚುತ್ತಿದೆ. ಆದುದರಿಂದಲೇ ರಾತ್ರಿ ಆಗುವುದು. “ವರೇಣಿಯಂ” ಎಂಬ ಒಂದೇ ಶಬ್ದದಲ್ಲಿ ಇಷ್ಟು ಅರ್ಥಗಳಿದ್ದು ಮೊದಲನೇ ಪಾದವು ಈ ವಿಶ್ವದಲ್ಲಿನ ಅನೇಕ ನಕ್ಷತ್ರ ರಾಶಿಗಳಲ್ಲಿ ಒಂದು ನಕ್ಷತ್ರವಾಗಿರುವ ನಮ್ಮ ಸೂರ್ಯನನ್ನು ವರಿಸುವ ನಮ್ಮ ಭೂಮಿಯ ನಿತ್ಯ ವ್ಯಾಪಾರವಾದ ಅ) ಸೂರ್ಯನ ಕಡೆ ಆಕರ್ಷಿಸಲ್ಪಡುವುದು ಆ) ತನ್ನ ಸುತ್ತಲೂ ತಾನು ತಿರುಗುವುದು ಇ) ಹೀಗೆ ಮಾಡುತ್ತಾ ರಾತ್ರಿ ಸಮಯದಲ್ಲಿ ಸೂರ್ಯನನ್ನು ಮುಚ್ಚುವುದು ಮತ್ತು ಈ) ಸುರ್ಯನ ಸುತ್ತಲೂ ತಿರುಗುತ್ತಿರುವುದು ಎಂಬ ಇದೆಲ್ಲವೂ ಸ್ಪಷ್ಟವಾಗಿ ಸೂಚಿಸಲ್ಪಟ್ಟಿದೆ. ಇತರ ಗ್ರಹಗಳ ಮತ್ತು ಚಂದ್ರರ ವ್ಯಾಪಾರಕ್ಕೂ ಇದು ಅನ್ವಯಿಸುತ್ತೆ. ಹೀಗೆ ಮೊದಲನೇ ಪಾದ ‘ಸತ್’ ನ ಸ್ವರೂಪವನ್ನು ಸ್ಥೂಲವಾಗಿ ವರ್ಣಿಸುತ್ತದೆ.
ಈ ಸತ್ತಿನಲ್ಲಿ ನಾವು ಕಾಣುತ್ತಿರುವುದೇನು? ಇದರಲ್ಲಿನ ವಸ್ತುಗಳು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆ ಆಗುತ್ತಲೇ ಇರುತ್ತವೆ. ಭೌತಿಕ ಪರಿಣಾಮಗಳೂ ರಾಸಾಯಿನಿಕ ಪರಿಣಾಮಗಳಿಗೂ ಆಗುತ್ತಲೇ ಇರುತ್ತವೆ. ಸೃಷ್ಟಿ ಸ್ಥಿತಿ ಲಯಗಳು ಪಡೆಯುತ್ತಲೇ ಇರುತ್ತವೆ. ಈ ಪರಿಣಾಮಗಳನ್ನು ಜೀವಿಗಳೆಲ್ಲರೂ ಹತ್ತಿರದಿಂದ ಗಮನಿಸುತ್ತಿರುವುದು ಕಾಯಿ ಹಣ್ಣಾಗುವುದರಲ್ಲಿ, ಅಡಿಗೆ ಮಾಡುವುದರಲ್ಲಿ ಮತ್ತು ಆಹಾರವು ಹೊಟ್ಟೆಯಲ್ಲಿ ಜೀರ್ಣವಾಗುವುದರಲ್ಲಿ. ಇದಕ್ಕೆಲ್ಲಾ ಸಂಸ್ಕೃತದಲ್ಲಿ “ಪಾಕ” ಎಂಬ ಒಂದು ಶಬ್ದವು ಸೂಚಿವಾಗಿದೆ. ಭ್ರಸ್ಜ (ಭೃಜ್ಜ್) ಪಾಕೇ ಎಂಬ ಧಾತುವಿನಿಂದ ಬಂದಿರುವ “ಭರ್ಗಃ” ಎಂಬ ಶಬ್ದವು ಈ ಪಾಕವನ್ನು ಅಂದರೆ ವಿಶ್ವದಲ್ಲಿನ ಅಥವಾ ಸತ್ತಿನಲ್ಲಿನ ನಿರಂತರ ಪರಿಣಾಮವನ್ನು ಸೂಚಿಸುತ್ತಿದೆ. ಈ ಪರಿಣಾಮವು ನಿಯಮಬದ್ಧವಾಗಿದೆ ಮತ್ತು ಇದರಲ್ಲಿ ಪರಸ್ಪರ ಸಂಬಂಧ ರೂಪವಾದ ಒಂದು ರಚನೆಯಿದೆ. ಈ ನಿಯಮ ಮತ್ತು ರಚನೆ ಒಂದು ಬುದ್ಧಿಶಕ್ತಿಯಿಲ್ಲದೆ ಸಾಧ್ಯವಿಲ್ಲ. ಈ ಬುದ್ಧಿ ಅಥವಾ ಸಂಕಲ್ಪಶಕ್ತಿಯೇ ಚಿತ್ತು. ಇದರ ಸ್ವರೂಪವನ್ನು ತರ್ಕದಿಂದ ಮಾತ್ರ ತಿಳಿಯಲು ಸಾಧ್ಯ. ಇಂದಿನ ವಿಜ್ಞಾನಿಗಳು ಅಣುಗಳು, ಪರಮಾಣುಗಳ ಸ್ವರೂಪ, ಅಣುಶಕ್ತಿ ಇವುಗಳ ವಿಷಯವನ್ನು ತಿಳಿದಿರುತ್ತಾರೆ. ಇದೆಲ್ಲಾ ಪ್ರಕೃತಿ ಎಂದು ಹೇಳುತ್ತಾ ಸತ್ತಿಗೆ ಸೇರಿಸುತ್ತಾರೆ. ಅಡ್ಡಿಯಿಲ್ಲ. ಪರಮಾಣುವಿನ ಸ್ವರೂಪ ಸೌರವ್ಯೂಹದ ಸ್ವರೂಪವನ್ನು ಹೋಲುತ್ತಿರುವುದೆಂದೂ ಕಂಡುಹಿಡಿದಿದ್ದಾರೆ. ಆದುದರಿಂದ ಗಾಯತ್ರಿಯ ಮೊದಲನೇ ಪಾದ ಪರಮಾಣುವಿನ ಸ್ವರೂಪದವರೆಗೂ ಅನ್ವಯಿಸುತ್ತದೆ. ಸವಿತೃ ಎಂದರೆ ಸೂ ಪ್ರೇರಣೆ ಎಂಬ ಧಾತುವಿನಿಂದ ಪ್ರೇರಕ ಶಕ್ತಿ ಎಂಬ ಅರ್ಥ ಬರುವುದರಿಂದ ಶಕ್ತಿಯ ಸತ್ತಿನಲ್ಲೇ ಸೇರುತ್ತೆ ಎಂದು ಭಾವಿಸಬಹುದು. ಆದರೆ ಈ ಸತ್ತಿನಲ್ಲಿನ ಪರಿಣಾಮಗಳಿಗೆ ಕಾರಣವಾದ ಚಿತ್ತಿನ ವಿಷಯವಾಗಿಯು ಅದಕ್ಕೆ ಮೂಲಭೂತವಾದ ಆನಂದದ ವಿಷಯವಾಗಿಯು ವಿಜ್ಞಾನಿಗಳು ಸೂಕ್ಷ್ಮವಾದ ಪರಿಶೋಧನೆಯನ್ನು ಇನ್ನೂ ಮಾಡಬೇಕಾಗಿದೆ.
ಆದುದರಿಂದ ‘ಭರ್ಗಃ’ ಎಂಬ ಪರಿಣಾಮ ಸೂಚಕವಾದ ಶಬ್ದವು ಚಿತ್ತಿನ ಅಸ್ತಿತ್ವದ ದ್ಯೋತಕವಾಗಿದೆ. ಋಷಿಗಳು ಚಿ ಚ್ಛಕ್ತಿಯ ವೈಜ್ಞಾನಿಕ ಪರಿಶೋಧಕರೂ ಸಾಧಕರೂ ಆಗಿದ್ದರು. ಅವರು ಈ ಪರಿಣಾಮಕ್ಕೆ ಕಾರಣವಾದ ಚಿತ್ತಿನ ವ್ಯಾಪಾರವನ್ನು “ದೇವ” ಎಂದು ಕರೆದರು. “ದೇವ” ಶಬ್ದವು “ದಿವು” ವಿಜಿಗೀಷಾ ವ್ಯವಹಾರ ದ್ಯುತಿ ಸ್ತುತಿ ಮೋದ ಮದ ಸ್ವಪ್ನ ಕಾಂತಿ ಗತಿಷು”ಎಂಬ ಧಾತುವಿನಿಂದ ಬಂದಿದೆ. ಇಲ್ಲಿ ಕೊಟ್ಟಿರುವ ಅನೇಕ ಅರ್ಥಗಳಲ್ಲಿ ನಾವು ಪ್ರಕೃತ ಕ್ರೀಡೆ, ವ್ಯವಹಾರ, ದ್ಯುತಿ (ಬೆಳಗುವುದು), ಕಾಂತಿ(ಕಾಮನೆ ಎಂಬ ಅರ್ಥ) ಮೋದ ಎಂಬ ಅರ್ಥಗಳನ್ನು ತೆಗೆದುಕೊಳ್ಳಬಹುದು. ಒಂದು ಮೋದಕ್ಕಾಗಿ ಕಾಮನೆಯಿಂದ ಬೆಳಗುತ್ತ ಕ್ರೀಡಾರೂಪವಾದ ವ್ಯವಹಾರವನ್ನು ನಡೆಸುತ್ತಿರುವುದೇ ‘ದೇವ’ ಎಂಬುದು. ಇದೇ ಚಿತ್ತಿನ ಸ್ವರೂಪ. “ಧೀಮಹಿ” ಎಂದರೆ ನಾವು ಧ್ಯಾನಿಸೋಣ ಅಥವಾ ಧ್ಯಾನಿಸಬೇಕು ಎಂದು ಅರ್ಥ. ಈ ಚಿತ್ತು ಬುದ್ಧಿ ಅಥವಾ ಧ್ಯಾನ ರೂಪದಲ್ಲಿ ಕೆಲಸ ಮಾಡುತ್ತದೆ. ಸಚ್ಚಿದಾತ್ಮಕವಾದ ನಮ್ಮ ಬಾಹ್ಯ ವ್ಯಾಪರವನ್ನು ಬುದ್ಧಿಯಿಂದ ಗಮನಿಸಿ ಅದು ದೇವತಾ ಶಕ್ತಿಗಳ ಲೀಲೆ ಎಂದು ತಿಳಿಯೋಣ ಎಂದು ಎರಡನೇ ಪಾದದಲ್ಲಿನ “ಧೀಮಹಿ” ಎಂಬ ಶಬ್ದದ ಭಾವ.
ಮೂರನೇ ಪಾದದಲ್ಲಿ ಬುದ್ಧಿಯಿಂದ ಆ ಪರಮಾತ್ಮನು ನಮ್ಮನ್ನು ಮುಂದಕ್ಕೆ ಸರಿಯಾದ ಗುರಿಯ ಕಡೆ ಕೊಂಡೊಯ್ಯಲಿ ಎಂಬ ಭಾವವಿದೆ. ಬುದ್ಧಿಯವರೆಗೆ ‘ಚಿತ್’ ವ್ಯಾಪಿಸಿಕೊಂಡಿದೆ. ಅಲ್ಲಿಂದ ಮುಂದಕ್ಕೆ ಇರುವುದೇ ಪರಮಾತ್ಮ. ನಮ್ಮಲ್ಲಿರುವ ‘ನಾನು’ ಎಂಬ ಭಾವನೆಯೇ ಎಲ್ಲದಕಿಂತಲೂ ಮೂಲವಾಗಿರುವುದು. ಇದೇ ಜೀವಾತ್ಮ. ಮನಸ್ಸು, ವಾಕ್ಕು, ಕಾರ್ಯಕ್ರಮಗಳೆಂಬ ತ್ರಿಕರಣಗಳಿಗೂ ಮೂಲಭೂತವಾಗಿರುವುದೇ ಈ ಜೀವಾತ್ಮ. ಆದರೆ ಇದು ಆಯಾ ದೇಹಗಳಿಗೆ ಸೀಮಿತವಾಗಿ ಸಂಕುಚಿತವಾಗಿರುತ್ತದೆ. ಆದರೆ ಅತ್ಯಂತ ವಿಶಾಲವಾದ ಈ ವಿಶ್ವದಲ್ಲಿ ಇದು ಒಂದು ಅಣುವಿದ್ದಂತೆ. ಇದಕ್ಕೆ ದೊರಕುವ ಆನಂದವು ಅಷ್ಟೇ. ಇದರ ಚಿತ್ತೂ ಅಷ್ಟೆ. ವಿಶ್ವದ ದರ್ಶನದಿಂದ ಬೃಹದಾಕಾರವಾಗಿ ಬೆಳೆಸಿಕೊಂಡು ಇದರ ಆನಂದವನ್ನು ಸಹ ಅದೇ ರೀತಿ ಬೆಳೆಸಿಕೊಳ್ಳುವ ಇಚ್ಛೆಯೇ ಮೂರನೇ ಪಾದದಲ್ಲಿ ಮೂಲಭಾವ. ಎರಡನೇ ಪಾದದಲ್ಲಿರುವ ‘ಧೀಮಹಿ’ ಎಂಬುದು ಈ ಮಂತ್ರದಲ್ಲೇ ಜೀವಾತ್ಮನಿಗೆ ಸಂಬಂಧಿಸಿರುವ ಮೊದಲನೆಯ ಪದ. ಇದು ‘ವಿಧಿಲಿಜ್’ ನಲ್ಲಿದ್ದು ಧ್ಯಾನಿಸೋಣ. ಧ್ಯಾನಿಸಬೇಕು ಎಂಬ ಭಾವಗಳನ್ನು ಹೊಂದಿ ಕ್ರಿಯಾತ್ಮಕವಾದ ಭಾವನೆಯಾಗಿದೆ. ಆದರೆ ಪ್ರಚೋದಯಾತ್ ಎಂಬುದು ಅತೀರ್ಲಿಜ್ಞಲ್ಲಿದ್ದು ಕೇವಲ ಬಯಕೆಯ ರೂಪದಲ್ಲಿದೆ. ಈ ಬಯಕೆ ಯಾವ ಕ್ರಿಯೆಗೂ ಸಂಬಂಧಿಸಿಲ್ಲ. ‘ಯಃ’ ಎಂದರೆ ಅಗೋಚರವಾದ, ಪರಮಾತ್ಮನು ಎಂಬ ಭಾವನೆ ಬರುತ್ತದೆ. ನಃ ಎಂಬುದು ಬಹುವಚನದಲ್ಲಿರುವುದರಿಂದ ಬಯಕೆಯು ಒಬ್ಬನೇ ಜೀವಾತ್ಮನಿಗೆ ಸಂಕುಚಿತವಾಗದೇ ಎಲ್ಲ ಜೀವಾತ್ಮರಿಗೂ ಅನ್ವಯಿಸುತ್ತ ವಿಶಾಲಭಾವವುಳ್ಳದ್ದಾಗಿದೆ. ಈ ಉದಾರ ಭಾವವು ಸಹ ‘ಬ್ರಹ್ಮ’ ಎಂದರೆ ಬೃಹತ್ತಾಗಿರುವುದರ ಭಾವನೆಗೆ ಪೋಷಕ. ‘ಚಿತ್’ ನ ಮೇರೆಯನ್ನು ಜೀವರುಗಳ ಕ್ರಿಯೆಗಳ ಮೇರೆಯನ್ನು ಮೀರಿ ಕೇವಲ ಪರಮಾತ್ಮನ ಕಡೆ ಮುಂದುವರಿಸುವ ಬಯಕೆಯು ಸಫಲತೆಯಲ್ಲಿ ತಾನೆ ಇರುವುದು. ಮೇಲ್ಕಂಡ ಸಚ್ಚಿದ್ರೂಪವಾದ ಜಗತ್ತಿನ ವ್ಯಾಪಾರವನ್ನು ಮೀರಿ ಅಗೋಚರ ಆದರೆ ವಿಶ್ವಮೂಲವಾದ ಪರಮಾತ್ಮನ ಕಡೆಗೆ ಉನ್ಮುಖವಾಗಿರುವ ಈ ಬಯಕೆಯ ಪೂರೈಕೆಯ ಆನಂದವೇ ಪರಮ ಶಾಶ್ವತವಾದ ಆನಂದ. ಇದೇ ಸಚ್ಚಿತ್ತುಗಳ ಕಾರ್ಯಕ್ಕೂ ಮೂಲ ಪ್ರೇರಣೆ. ಈ ರೀತಿಯಾಗಿ ಮೂರನೆಯ ಪಾದವು “ಆನಂದ”ದ ದ್ಯೋತಕವಾಗಿದೆ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)